14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾವೈರಸ್ ಭೀತಿಯ ನಡುವೆಯೇ ಭಾರತದಲ್ಲಿ ನಡೆಯುತ್ತಿದೆ. ಕೊರೊನಾವೈರಸ್ ಹೆಚ್ಚಳವಾಗುತ್ತಿರುವ ಕಾರಣ ಕುಟುಂಬಸ್ಥರ ಜೊತೆ ಇರಬೇಕು ಎಂಬ ಉದ್ದೇಶದಿಂದ ಈಗಾಗಲೇ ಹಲವಾರು ಐಪಿಎಲ್ ಆಟಗಾರರು ಮತ್ತು ನಿರ್ಣಯಕಾರರು ಕೂಡ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೇ ಬಿಟ್ಟು ಹೊರ ನಡೆದಿದ್ದಾರೆ. ಹೀಗೆ ಕೊವಿಡ್ ಭಯದಲ್ಲೇ ನಡೆದಿರುವ ಐಪಿಎಲ್ ಟೂರ್ನಿ ಮತ್ತು ಆಟಗಾರರ ಕುರಿತು ಇದೀಗ ಐಪಿಎಲ್ ಸ್ಥಾಪಕ ಲಲಿತ್ ಮೋದಿ ಕಿಡಿಕಾರಿದ್ದಾರೆ.
ಭಾರತ ದೇಶದಾದ್ಯಂತ ಕೊರೊನಾವೈರಸ್ನ ಎರಡನೇ ಅಲೆ ಅತಿ ಪರಿಣಾಮವನ್ನು ಬೀರಿದ್ದು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾಗಿದ್ದು, ಎಷ್ಟೋ ಜನ ಸೋಂಕಿತರು ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕಿನಿಂದ ಸಾವುಗಳು ಸಂಭವಿಸುತ್ತಿದ್ದರೂ ಐಪಿಎಲ್ ಆಟಗಾರರು ಮಾತ್ರ ಇದಕ್ಕೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಇದ್ದಾರೆ. ದೇಶದ ಸಾರ್ವಜನಿಕರು ಅಷ್ಟೆಲ್ಲ ಕಷ್ಟ ಪಡುತ್ತಿದ್ದರೂ ಐಪಿಎಲ್ ಆಟಗಾರರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಲಂಡನ್ನಲ್ಲಿರುವ ಲಲಿತ್ ಮೋದಿ ಕಿಡಿಕಾರಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಹಲವಾರು ಮಂದಿ ಸಾವನ್ನಪ್ಪುತ್ತಿದ್ದರೂ ಸಹ ಅನೇಕ ಸ್ಟಾರ್ ಕ್ರಿಕೆಟಿಗರು ಯಾವುದೇ ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿಲ್ಲ. ಆರ್ಥಿಕ ಸಹಾಯ ಮಾಡುವುದಿರಲಿ ಮೈದಾನದಲ್ಲಿ ಕೈಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸುವ ಒಂದು ಸಣ್ಣ ಕಾಳಜಿಯೂ ಸಹ ಆಟಗಾರರಲ್ಲಿ ಇಲ್ಲ ಎಂದು ಲಲಿತ್ ಮೋದಿ ಬೇಸರ ವ್ಯಕ್ತ ಪಡಿಸಿದರು. ಆಟಗಾರರು ಈ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲವಾ ಅಥವಾ ಯಾರಾದರೂ ಆಟಗಾರರನ್ನು ಇಂತಹ ವಿಷಯಗಳಿಗೆ ತಲೆಹಾಕದಂತೆ ತಡೆಯುತ್ತಿದ್ದಾರಾ ಎಂಬ ಸಂಶಯವನ್ನು ಲಲಿತ್ ಮೋದಿ ವ್ಯಕ್ತಪಡಿಸಿದರು.
ಈಗಾಗಲೇ ಕೆಲ ಕ್ರಿಕೆಟಿಗರು ಕೊರೊನಾವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಆರ್ಥಿಕ ಸಹಾಯವನ್ನು ಮಾಡಿದ್ದು, ಅಂತಹ ಆಟಗಾರರಿಗೆ ಲಲಿತ್ ಮೋದಿ ಧನ್ಯವಾದಗಳನ್ನು ತಿಳಿಸಿದರು. ಹಾಗೂ ಕೊರೊನಾ ಸೋಂಕಿತರು ಹೆಚ್ಚಿರುವ ಮುಂಬೈನಂತಹ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುತ್ತಿರುವ ಬಗ್ಗೆಯೂ ಲಲಿತ್ ಮೋದಿ ಆಕ್ರೋಶವನ್ನು ವ್ಯಕ್ತಪಡಿಸಿದರು.