ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿ ಪಡೆ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ ನೀಡಿದ 192 ರನ್ಗಳ ಗುರಿಯನ್ನು ಬೆನ್ನಟ್ಟಲಾಗದೆ ವಿರಾಟ್ ಪಡೆ ಶರಣಾಯಿತು. ರವೀಂದ್ರ ಜಡೇಜಾ ಆಲ್ರೌಂಡರ್ ಪ್ರದರ್ಶನ ಬೆಂಗಳೂರು ತಂಡದ ಸೋಲಿಗೆ ಬಹುಮುಖ್ಯ ಕಾರಣವಾಗಿದೆ.
ಬ್ಯಾಟಿಂಗ್ನಲ್ಲಿ ಅಂತಿಮ ಓವರ್ನಲ್ಲಿ 37 ರನ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದ ರವೀಂದ್ರ ಜಡೇಜಾ ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲೂ ಆರ್ಸಿಬಿಗೆ ದುಸ್ವಪ್ನವಾಗಿ ಕಾಡಿದರು. ಮೂರು ವಿಕೆಟ್ ಪಡೆದ ಜಡ್ಡು ಒಂದು ರನ್ಔಟ್ ಮಾಡಿ ಬೆಂಗಳೂರು ತಂಡಕ್ಕೆ ಆಘಾತ ನೀಡಿದರು. ಈ ಆಘಾತದಿಂದ ಆರ್ಸಿಬಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್ಸಿಬಿ ತಂಡಕ್ಕೆ ಭರವಸೆಯ ಆರಂಭ ದೊರೆಯಿತು. ದೇವದತ್ ಪಡಿಕ್ಕಲ್ ಆರಂಭದಿಂದಲೇ ಸ್ಪೋಟಕ ಪ್ರದರ್ಶನ ನೀಡಲು ಆರಂಭಿಸಿದರು. ಆದರೆ ಇದು ಹೆಚ್ಚು ಹೊತ್ತು ನಡೆಯಲಿಲ್ಲ. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕೇವಲ 8 ರನ್ಗಳಿಸಿ ಮೊದಲ ವಿಕೆಟ್ ಆಗಿ ಬಲಿಯಾದರು.
ನಂತರ ದೇವದತ್ ಪಡಿಕ್ಕಲ್ ಕೂಡ 15 ಎಸೆತಗಳಲ್ಲಿ 34 ರನ್ಗಳಿಸಿ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ಅದಾದ ನಂತರ ಆರ್ಸಿಬಿಯ ಫೆವಿಲಿಯನ್ ಪೆರೇಡ್ ಆರಂಭವಾಯಿತು. ಗ್ಲೆನ್ ಮ್ಯಾಕ್ಸ್ವೆಲ್ ಸಣ್ಣ ಮಟ್ಟದ ಭರವಸೆ ಮೂಡಿಸಿದರಾದರೂ 22 ರನ್ಗಳಿಗೆ ಔಟ್ ಆದರು. ವಾಶಿಂಗ್ಟನ್ ಸುಂದರ್, ಡೇನಿಯಲ್ ಕ್ರಿಶ್ಚಿಯನ್ ಹಾಗೂ ಎಬಿ ಡಿವಿಲಿಯರ್ಸ್ ಕೂಡ ಒಂದಂಕಿ ದಾಟುವ ಮುನ್ನವೇ ಔಟ್ ಆದರು.
ಆರ್ಸಿಬಿ ಪರವಾಗಿ ಬೌಲಿಂಗ್ನಲ್ಲಿ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಮಿಂಚಿದರು. ಇಮ್ರಾನ್ ತಾಹೀರ್ ಎರಡು ವಿಕೆಟ್ ಪಡೆದರು. ಉಳಿದಂತೆ ಸ್ಯಾಮ್ ಕರನ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.