ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದಾಗ ತಮ್ಮ ಕಳಪೆ ಪ್ರದರ್ಶನದಿಂದಾಗಿ ಸಾಲುಸಾಲು ಟ್ರೋಲ್ ಮತ್ತು ಟೀಕೆಗಳನ್ನು ಎದುರಿಸಿದರು. ಎದುರಾಳಿ ಬ್ಯಾಟ್ಸ್ಮನ್ಗಳಿಂದ ಸಿಕ್ಕಾಪಟ್ಟೆ ರನ್ ಬಾರಿಸಿಕೊಳ್ಳುತ್ತಿದ್ದ ಸಿರಾಜ್ ಪ್ರತಿ ಪಂದ್ಯದಲ್ಲಿಯೂ ದುಬಾರಿ ಬೌಲರ್ ಆಗುತ್ತಿದ್ದರು.
ಆದರೆ ಈಗ ಎಲ್ಲವೂ ಬದಲಾಗಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನ ಸುಳಿಯಲ್ಲಿದ್ದಾಗ ಮೊಹಮ್ಮದ್ ಸಿರಾಜ್ ತಮ್ಮ ಉತ್ತಮ ಪ್ರದರ್ಶನದ ಮೂಲಕ ತಂಡವನ್ನು ಗೆಲ್ಲಿಸುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಪ್ರಸ್ತುತ ಟೂರ್ನಿಯ ಪಂದ್ಯವೊಂದರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಜಯ ಸಾಧಿಸುವ ಹಂತಕ್ಕೆ ಬಂದಿದ್ದಾಗ 19ನೇ ಓವರ್ ಮಾಡಿದ ಸಿರಾಜ್ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಮಾಡುತ್ತಿದ್ದರೂ 5 ಡಾಟ್ ಬಾಲ್ ಹಾಕಿ, ಆ ಓವರ್ನಲ್ಲಿ ಕೇವಲ 1 ರನ್ ನೀಡುವ ಮೂಲಕ ಪಂದ್ಯವನ್ನು ಗೆಲ್ಲುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಮಂಗಳವಾರ (ಏಪ್ರಿಲ್ 27) ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಸಹ ಕೊನೆಯ ಓವರ್ ಮಾಡಿದ ಸಿರಾಜ್ ಉತ್ತಮ ಬೌಲಿಂಗ್ ಮಾಡಿ ತಂಡವನ್ನು ಗೆಲ್ಲಿಸಿದರು. ಕೊನೆಯ ಓವರ್ನಲ್ಲಿ ಡೆಲ್ಲಿಗೆ ಗೆಲ್ಲಲು 14 ರನ್ಗಳ ಅಗತ್ಯವಿತ್ತು, ಆದರೆ ಸಿರಾಜ್ ಒತ್ತಡದ ನಡುವೆಯೂ ಉತ್ತಮ ಬೌಲಿಂಗ್ ಮಾಡಿ ಆ ಓವರ್ನಲ್ಲಿ 13 ರನ್ ನೀಡಿ ಉತ್ತಮ ಪ್ರದರ್ಶನ ನೀಡಿದರು.
ರಿಕ್ಷಾ ಚಾಲಕನ ಮಗ ಕ್ರಿಕೆಟರ್ ಸಿರಾಜ್ ಕನಸು ನನಸು
ಹೀಗೆ ಪ್ರಸ್ತುತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಸಿರಾಜ್ ತಮ್ಮ ಉತ್ತಮ ಬೌಲಿಂಗ್ಗೆ ಕಾರಣರಾದ ಇಬ್ಬರು ಆಟಗಾರರ ಹೆಸರನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳ ವೇಳೆ ತಾನು ತನ್ನ ಬೌಲಿಂಗ್ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಉತ್ತಮ ಎಸೆತಗಳನ್ನು ಕಲಿತೆ, ಆ ಸರಣಿಯ ಮೂಲಕ ತನ್ನ ಬೌಲಿಂಗ್ ಸುಧಾರಿಸಿತು ಎಂದು ಸಿರಾಜ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆ ಸರಣಿಗಳ ವೇಳೆ ಇಶಾಂತ್ ಶರ್ಮ ಮತ್ತು ಜಸ್ಪ್ರೀತ್ ಬುಮ್ರಾ ತನಗೆ ನೀಡಿದ ಸಲಹೆಗಳು ತನ್ನ ಬೌಲಿಂಗ್ ಸುಧಾರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದವು ಎಂದು ಮೊಹಮ್ಮದ್ ಸಿರಾಜ್ ತಿಳಿಸಿದರು. ಪಂದ್ಯ ಆರಂಭಕ್ಕೂ ಮುನ್ನ ಇಶಾಂತ್ ಶರ್ಮ ಮತ್ತು ಜಸ್ಪ್ರೀತ್ ಬುಮ್ರಾ ಕೊಟ್ಟ ಸಲಹೆಗಳೇ ನನಗೆ ಸ್ಫೂರ್ತಿಯಾಗಿ ಪರಿಣಮಿಸಿದವು ಎಂದು ಸಿರಾಜ್ ಹೇಳಿಕೊಂಡಿದ್ದಾರೆ.