ಕೊನೆಯ 5 ಓವರ್ನಲ್ಲಿ ನಿಧಾನಗತಿಯ ಬ್ಯಾಟಿಂಗ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿಗೆ ಕಾರಣವನ್ನು ತಿಳಿಸಿದ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೇಳೆ ಕೊನೆಯ 5 ಓವರ್ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದೇ ಸೋಲಿಗೆ ಕಾರಣ ಎಂದಿದ್ದಾರೆ. 'ಮೊದಲು ಬ್ಯಾಟಿಂಗ್ ಮಾಡಿದ ನಮ್ಮ ತಂಡ 150 ರನ್ಗಳ ಗುರಿಯನ್ನು ಇಟ್ಟುಕೊಂಡಿತ್ತು, ಆದರೆ ಅಂತಿಮ 5 ಓವರ್ಗಳಲ್ಲಿ ನಾವು ನಿಧಾನಗತಿಯ ಬ್ಯಾಟಿಂಗ್ ಮಾಡಿದ ಕಾರಣ ನಾವು ಅಂದುಕೊಂಡ ಗುರಿಯನ್ನು ತಲುಪಲಾಗಲಿಲ್ಲ' ಎಂದು ಎಂ ಎಸ್ ಧೋನಿ ಹೇಳಿಕೆ ನೀಡಿದ್ದಾರೆ.
ಪಿಚ್ ರನ್ ಗಳಿಸಲು ಸಹಕಾರಿಯಾಗಿರಲಿಲ್ಲ
ಇನ್ನು ದುಬೈ ಕ್ರೀಡಾಂಗಣದ ಪಿಚ್ ಕುರಿತು ಮಾತನಾಡಿದ ಎಂ ಎಸ್ ಧೋನಿ ಪಿಚ್ ಬ್ಯಾಟ್ಸ್ಮನ್ಗಳಿಗೆ ಹೆಚ್ಚಿನ ಮತ್ತು ವೇಗದ ರನ್ ಗಳಿಸಲು ಸಹಕಾರಿಯಾಗಿರಲಿಲ್ಲ ಎಂದಿದ್ದಾರೆ. 'ಪಿಚ್ ತುಂಬಾ ಕಠಿಣವಾಗಿದ್ದ ಕಾರಣ ಬ್ಯಾಟ್ಸ್ಮನ್ ತಾನು ಇಚ್ಛಿಸಿದ ರೀತಿ ಬ್ಯಾಟ್ ಬೀಸಲು ಆಗುತ್ತಿರಲಿಲ್ಲ, ನಮ್ಮ ತಂಡದ ಬ್ಯಾಟ್ಸ್ಮನ್ಗಳ ರೀತಿಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್ಮನ್ಗಳು ಕೂಡ ಈ ಪಿಚ್ನಲ್ಲಿ ರನ್ ಗಳಿಸಲು ಪರದಾಡಿದರು' ಎಂದು ಎಂಎಸ್ ಧೋನಿ ಹೇಳಿಕೆ ನೀಡಿದ್ದಾರೆ.
ಎರಡನೇ ಸ್ಥಾನಕ್ಕೆ ಕುಸಿದ ಚೆನ್ನೈ ಸೂಪರ್ ಕಿಂಗ್ಸ್
ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯ ಆರಂಭವಾಗುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರ ಸ್ಥಾನದಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಸೋಲುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಥಮ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದು ದ್ವಿತೀಯ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಸ್ಥಾನಕ್ಕೇರಿದೆ.