ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಐಪಿಎಲ್ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಕಳೆದ ಮಂಗಳವಾರ ಈ ಬಗ್ಗೆ ನಿರ್ಧಾರವನ್ನು ಕೈಗೊಂಡಿದ್ದು ಆಟಗಾರರ ತಮ್ಮ ತವರಿಗೆ ವಾಪಾಸಾಗುತ್ತಿದ್ದಾರೆ. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರವನ್ನು ಎಲ್ಲಾ ಫ್ರಾಂಚೈಸಿಗಳು ಕೂಡ ಸ್ವಾಗತಿಸಿದೆ.
ಐಪಿಎಲ್ನ 5 ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ಭಾರತೀಯ ಕ್ರಿಕೆಟ್ನ ಸರ್ವೋಚ್ಚ ಸಂಸ್ಥೆ ತೆಗೆದುಕೊಂಡಿರುವ ಟೂರ್ನಿ ಮುಂದೂಡುವ ನಿರ್ಧಾರವನ್ನು ಬೆಂಬಲಿಸಲಾಗಿದೆ.
ಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು
ಈ ವಿಡಿಯೋದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬಿಸಿಸಿಐ ಐಪಿಎಲ್ 2021 ಆವೃತ್ತಿಯನ್ನು ಮುಂದೂಡುವಂತೆ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. "ದುರದೃಷ್ಟವಶಾತ್ ಟೂರ್ನಿ ಮುಂದೂಡುವಂತಾಗಿದೆ. ದೇಶದ ಸುತ್ತಲೂ ನಡೆಯುತ್ತಿರುವ ಘಟನೆಗಳತ್ತ ಗಮನಿಸಿದರೆ ನನ್ನ ಪ್ರಕಾರ ಇದು ಉತ್ತಮವಾದ ನಿರ್ಧಾರ" ಎಂದು ಶರ್ಮಾ ಹೇಳಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಇದೇ ರೀತಿಯ ಅಭಿಪ್ರಾಯವನ್ನು ಈ ವಿಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಮಧ್ಯದಲ್ಲಿ ಸ್ಥಗಿತವಾಗಿರುವುದು ದುರದೃಷ್ಟಕರ. ಪ್ರತಿಯೊಬ್ಬರ ಒಳಿತಿಗಾಗಿ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಾದ ನಿರ್ಧಾರ ಎಂದು ಬೂಮ್ರಾ ಹೇಳಿದ್ದಾರೆ. ಜಯಂತ್ ಯಾದವ್, ಆಡಂ ಮಿಲ್ನೆ, ಶೇನ್ ಬಾಂಡ್ ಹಾಗೂ ರಾಬಿನ್ ಸಿಂಗ್ ಕೂಡ ಈ ವಿಡಿಯೋದಲ್ಲಿ ಮಾತಮಾಡಿದ್ದಾರೆ.