ಆತನಿಗೇನಪ್ಪ ಕ್ರಿಕೆಟರ್, ಐಷಾರಾಮಿ ಜೀವನ, ಚಿಂತೆ ಇಲ್ಲದ ಬದುಕು ಎಂದೇ ಬಹುತೇಕ ಮಂದಿ ಊಹಿಸಿರುತ್ತಾರೆ. ಆದರೆ ಒಬ್ಬ ಕ್ರಿಕೆಟಿಗನ ಬದುಕು ನಾವು ನೀವು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ, ಕ್ರಿಕೆಟ್ನಲ್ಲಿ ಯಶಸ್ಸು ಗಳಿಸಲು ಹಲವಾರು ಕ್ರಿಕೆಟಿಗರು ಜೀವನದಲ್ಲಿ ಹಲವಾರು ತ್ಯಾಗ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ನಿಮ್ಮೆಲ್ಲರ ಮುಂದೆಯೇ ಇದೆ. ಅಂತಹ ತ್ಯಾಗ ಮತ್ತು ಕಷ್ಟಗಳನ್ನು ದಾಟಿ ಬಂದಂತಹ ಮತ್ತೊಬ್ಬ ಕ್ರಿಕೆಟರ್ ಚೇತನ್ ಸಕಾರಿಯಾ ಒಬ್ಬ ಟೆಂಪೋ ಚಾಲಕನ ಮಗ. ಟೆಂಪೋ ಚಾಲಕನ ಮಗನಾದರೂ ಸಹ ತಮ್ಮ ಮಗ ಸ್ಟಾರ್ ಕ್ರಿಕೆಟರ್ ಆಗಬೇಕು ಅಂತ ಚೇತನ್ ಸಕಾರಿಯಾ ತಂದೆ ಕನಸು ಕಂಡಿದ್ದರು.
23 ವರ್ಷದ ಕ್ರಿಕೆಟಿಗ ಚೇತನ್ ಸಕಾರಿಯಾ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಗುಜರಾತಿನ ಭಾವನಗರದಲ್ಲಿ. 2018ರಿಂದ ಸೌರಾಷ್ಟ್ರ ತಂಡದ ಪರ ಆಡುತ್ತಿರುವ ಈ ಪ್ರತಿಭೆ ಸೋಮವಾರ ( ಏಪ್ರಿಲ್ 12 ) ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜೆರ್ಸಿ ತೊಟ್ಟು ತಮ್ಮ ಮೊದಲ ಐಪಿಎಲ್ ಪಂದ್ಯವನ್ನಾಡಿದರು. ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ದೈತ್ಯ ಆಟಗಾರರ ವಿಕೆಟ್ ಪಡೆಯುವ ಮೂಲಕ ಚೇತನ್ ಸಕಾರಿಯಾ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕೆಎಲ್ ರಾಹುಲ್ , ಮಯಾಂಕ್ ಅಗರ್ವಾಲ್ ಮತ್ತು ನಿಕೋಲಸ್ ಪೂರನ್ ಅವರ ವಿಕೆಟ್ಗಳನ್ನು ಪಡೆದು ಚೇತನ್ ಸಕರಿಯಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾದರು. 4 ಓವರ್ಗಳನ್ನು ಮಾಡಿದ ಚೇತನ್ ಸಕರಿಯಾ 31 ರನ್ ನೀಡಿ ಪಂಜಾಬ್ ತಂಡದ ಪ್ರಮುಖ ವಿಕೆಟ್ಗಳನ್ನು ಪಡೆದರು. ಈ ಹಿಂದೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿಯೂ ಸಹ ಚೇತನ್ ಸಕ್ರಿಯ ಉತ್ತಮ ಬೌಲಿಂಗ್ ಮಾಡಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದರು.
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದ ಬಳಿಕ ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಚೇತನ್ ಸಕಾರಿಯಾ ಅವರ ಕುಟುಂಬದ ದುರಂತ ಕತೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಚೇತನ್ ಸಕಾರಿಯಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸಿದ್ದಾಗ ಅವರ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯವನ್ನು ಹತ್ತು ದಿನವಾದರೂ ಸಹ ಚೇತನ್ ಸಕಾರಿಯಾಗೆ ಅವರ ತಾಯಿ ಹೇಳಿರಲಿಲ್ಲ. ವಿಷಯ ತಿಳಿದರೆ ತನ್ನ ಮಗ ಚೆನ್ನಾಗಿ ಕ್ರಿಕೆಟ್ ಆಡುವುದಿಲ್ಲ ಎಂಬ ಕಾರಣಕ್ಕೆ ಚೇತನ್ ಸಕಾರಿಯಾ ಅವರ ತಾಯಿ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಕರೆ ಮಾಡಿದಾಗಲೂ ಸಹ ಚೇತನ್ ಸಕಾರಿಯಾ ತಾಯಿ ವಿಷಯವನ್ನು ಹೇಳದೆ ದುಃಖವನ್ನು ಮುಚ್ಚಿಟ್ಟುಕೊಂಡು ಮಾತನಾಡಿದ್ದರು. ಚೇತನ್ ಅವರ ತಂದೆ ಎರಡನೇ ಮಗ ಸತ್ತ ವಿಷಯವನ್ನು ತಿಳಿಸಿಬಿಡುತ್ತಾರೇನೋ ಎಂಬ ಭಯದಿಂದ ಚೇತನ್ ತಾಯಿ ಅವರಿಗೂ ಸಹ ಚೇತನ್ ಜೊತೆ ಮಾತನಾಡಲು ಬಿಡದೇ ನಿಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿದ್ದರು. ಕರೆ ಮಾಡಿದಾಗಲೆಲ್ಲ ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದರು ಚೇತನ್ ಸಕಾರಿಯಾ. ತಮ್ಮನ ಬಗ್ಗೆ ಕೇಳಿದಾಗಲೆಲ್ಲಾ ಚೇತನ್ ತಾಯಿ ಮಾತು ಮರೆಸಿ ಬೇರೆ ವಿಷಯದ ಬಗ್ಗೆ ಮಾತನಾಡಲು ಆರಂಭಿಸುತ್ತಿದ್ದರು.
ಒಂದೆಡೆ ಹಣಕಾಸಿನ ಸಮಸ್ಯೆ, ಮತ್ತೊಂದೆಡೆ ಎರಡನೇ ಮಗನನ್ನು ಕಳೆದುಕೊಂಡ ನೋವು ತಡೆಯಲಾರದೆ ಒಮ್ಮೆ ತಾವೇ ಚೇತನ್ ಸಕಾರಿಯಾಗೆ ಆತನ ತಮ್ಮ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಅವರ ತಾಯಿಯೇ ಹೇಳಿಬಿಡುತ್ತಾರೆ. ತಮ್ಮನ ಆತ್ಮಹತ್ಯೆ ವಿಷಯ ತಿಳಿದ ಚೇತನ್ ಸಕಾರಿಯಾ ಒಂದು ವಾರದ ಕಾಲ ಯಾರೊಂದಿಗೂ ಮಾತನಾಡದೆ, ಸರಿಯಾಗಿ ಊಟವನ್ನೂ ಮಾಡದೆ ಒಬ್ಬಂಟಿಯಾಗಿದ್ದು ಬಿಡುತ್ತಾರೆ. ಈ ಕಹಿ ಘಟನೆ ನಡೆದ ಒಂದು ತಿಂಗಳ ಬಳಿಕ ಚೇತನ್ ಸಕಾರಿಯಾ 2021ರ ಐಪಿಎಲ್ ಮಿನಿ ಹರಾಜಿನಲ್ಲಿ 1.20 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗುತ್ತಾರೆ. ಚೇತನ್ ಪಟ್ಟ ಕಷ್ಟಕ್ಕೂ ಮತ್ತು ಮಾಡಿದ ತ್ಯಾಗಕ್ಕೂ ಪ್ರತಿಫಲ ಸಿಗುತ್ತದೆ. ಚೇತನ್ & ಅವರ ಜೀವನದಲ್ಲಿ ನಡೆದ ಈ ಕಹಿ ಘಟನೆಯನ್ನು ಸ್ವತಃ ಅವರ ತಾಯಿಯೇ ಹಂಚಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿರೇಂದ್ರ ಸೆಹ್ವಾಗ್ ಕ್ರಿಕೆಟ್ಗೋಸ್ಕರ ಆ ಕುಟುಂಬ ಪಟ್ಟ ಕಷ್ಟ & ಆ ಕಷ್ಟಕ್ಕೆ ಐಪಿಎಲ್ ಟೂರ್ನಿಯಲ್ಲಿ ಸಿಕ್ಕ ಪ್ರತಿಫಲವನ್ನು ಪ್ರಶಂಸಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.