14ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಸೋಮವಾರ ( ಏಪ್ರಿಲ್ 12 ) ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಿದ್ದವು. ಪಂಜಾಬ್ ಕಿಂಗ್ಸ್ ತಂಡದ ಪರ ಕೆ ಎಲ್ ರಾಹುಲ್, ಕ್ರಿಸ್ ಗೇಲ್ ಮತ್ತು ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಕ್ರಿಸ್ ಗೇಲ್ 28 ಎಸೆತಗಳಿಗೆ 40, ದೀಪಕ್ ಹೂಡಾ 28 ಎಸೆತಗಳಿಗೆ 64 ಮತ್ತು ಕೆಎಲ್ ರಾಹುಲ್ 50 ಎಸೆತಗಳಿಗೆ 91 ರನ್ ಬಾರಿಸಿದ್ದರು.
ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. 222 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಯಶಸ್ವಿಯಾಗಿ ಗುರಿ ಮುಟ್ಟುವಲ್ಲಿ ಕೊನೆ ಹಂತದಲ್ಲಿ ಎಡವಿತು. ಹೀಗಾಗಿ ಪಂಜಾಬ್ ಕಿಂಗ್ಸ್ 4 ರನ್ಗಳ ಜಯ ಸಾಧಿಸಿತು. ಈ ಪಂದ್ಯದ ವೇಳೆ ಮೈದಾನದಲ್ಲಿ ಕ್ರಿಸ್ ಗೇಲ್ ಮತ್ತು ಕೆ ಎಲ್ ರಾಹುಲ್ ಕ್ಷೇತ್ರ ರಕ್ಷಣೆ ಕುರಿತು ಮಾತನಾಡುತ್ತಿದ್ದ ವಿಡಿಯೋ ತುಣುಕೊಂದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಜುವೇಂದ್ರ ಚಹಾಲ್ ಕ್ರಿಸ್ ಗೇಲ್ ಮತ್ತು ರಾಹುಲ್ ಇಬ್ಬರನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ.
ಚಹಾಲ್ ಈ ರೀತಿ ಮಾಡಲು ಕಾರಣ ಪಂಜಾಬ್ ಕಿಂಗ್ಸ್ ತಂಡ ಈ ವರ್ಷ ಬಳಸುತ್ತಿರುವ ಜೆರ್ಸಿ. ಹೌದು ಪಂಜಾಬ್ ಕಿಂಗ್ಸ್ ಈ ಆವೃತ್ತಿಯಲ್ಲಿ ಬಳಸುತ್ತಿರುವ ಹೊಸ ಜೆರ್ಸಿ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಪಯೋಗಿಸಿದ್ದ ಜೆರ್ಸಿಯ ರೀತಿಯೇ ಇರುವುದರಿಂದ ಚಹಾಲ್ ಕ್ರಿಸ್ ಗೇಲ್ & ಕೆ ಎಲ್ ರಾಹುಲ್ ಇಬ್ಬರಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸುಸ್ವಾಗತ ಎಂದು ಟ್ವೀಟ್ ಮಾಡುವ ಮುಖಾಂತರ ಕಾಲೆಳೆದಿದ್ದಾರೆ.