ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ವೇಗಿ ಮೊಹಮ್ಮದ್ ಸಿರಾಜ್ ಸಾಕಷ್ಟು ಭರವಸೆಯನ್ನು ಮೂಡಿಸಿದ ಆಟಗಾರ. ಆದರೆ ಅದಕ್ಕೂ ಮುನ್ನ ಕಳೆದ ಐಪಿಎಲ್ ಆವೃತ್ತಿಗಾಗಿ ಆರ್ಸಿಬಿ ತಂಡವನ್ನು ಸೇರಿಕೊಂಡಾದ ಹೈದರಾಬಾದ್ ಮೂಲದ ಈ ವೇಗಿಯಲ್ಲಿ ಆತ್ಮವಿಶ್ವಾಸವಿರಲಿಲ್ಲವಂತೆ. ಆದರೆ ಬಳಿಕ ಅದನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಸಿರಾಜ್.
ಐಪಿಎಲ್ನಲ್ಲಿ ಬೌಲರ್ಆಗಿ ಮೊಹಮ್ಮದ್ ಸಿರಾಜ್ ಹೇಗೆ ಯಶಸ್ಸಿನ ಹಾದಿಗೆ ಬಂದರು ಎಂಬುದನ್ನು ಸಿರಾಜ್ ಹೇಳಿಕೊಂಡಿದ್ದಾರೆ. "ಕಳೆದ ಬಾರಿ ಆರ್ಸಿಬಿಗೆ ಸೇರಿಕೊಂಡಾಗ ನಾನು ಕಡಿಮೆ ಆತ್ಮವಿಶ್ವಾಸವನ್ನು ಹೊಂದಿದ್ದೆ. ಆದರೆ ನಾನು ಹೊಸ ಚೆಂಡಿನೊಂದಿಗೆ ಬೌಲಿಂಗ್ಗೆ ಇಳಿದ ಬಳಿಕ, ಒಂಟಿ ವಿಕೆಟ್ಗೆ ಚೆಂಡೆಸೆಯಲು ಆರಂಭಿಸಿದೆ. ಇದು ನನಗೆ ಸಹಾಯವಾಯಿತು. ಬಳಿಕ ಕೆಕೆಆರ್ ವಿರುದ್ಧದ ಪ್ರದರ್ಶನ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು" ಎಂದಿದ್ದಾರೆ ಮೊಹಮ್ಮದ್ ಸಿರಾಜ್.
ಐಪಿಎಲ್ : ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿ
ಇನ್ನು ಇದೇ ಸಂದರ್ಭದಲ್ಲಿ ಆರ್ಸಿಬಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಸಲಹೆಗಳು ಉಪಯುಕ್ತವಾಯಿತು ಎಂದು ಹೇಳಿದ್ದಾರೆ. "ನಾನು ಸಂಜಯ್ ಬಂಗಾರ್ ಅವರೊಂದಿಗೆ ಮಾತನಾಡುತ್ತಿದ್ದೆ. ಅವರು ನನ್ನ ಲಯ ಚೆನ್ನಾಗಿದೆ ಎಂದು ಹೇಳಿದ್ದರು. ಬಹಳ ದಿನಗಳ ನಂತರ ನಾನು ನಿಮ್ಮನ್ನು ಭೇಟಿಯಾಗುತ್ತಿದ್ದೇನೆ. ಆದರೆ ನೀವು ಭಾರತೀಯ ತಂಡಕ್ಕೆ ಹಾಕಿದ ಅದೇ ಪ್ರಯತ್ನವನ್ನು ನೀವು ಮಾಡುತ್ತಿದ್ದೀರಿ. ನಿಮ್ಮ ಲಯ, ಆಕ್ರಮಣಶೀಲತೆ ಮತ್ತು ಆತ್ಮವಿಶ್ವಾಸ, ಎಲ್ಲವೂ ಚೆನ್ನಾಗಿ ಕಾಣುತ್ತಿದೆ. ಆದ್ದರಿಂದ ಅದನ್ನು ಮುಂದುವರಿಸಿ ಎಂದಿದ್ದರು" ಎಂದು ಸಿರಾಜ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರವಾಗಿ ಆಡುವಾಗ ಅನುಭವಿಗಳಾದ ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬೂಮ್ರಾ ಅವರ ಬೆಂಬಲವನ್ನು ಕೂಡ ಸ್ಮರಿಸಿದ್ದಾರೆ. " ನಾನು ಬೌಲಿಂಗ್ಗೆ ಇಳಿಯುವಾಗ ಯಾವಾಗಲೂ ಜಸ್ಪ್ರೀತ್ ಬೂಮ್ರಾ ನನ್ನ ಜೊತೆಯಲ್ಲಿಯೇ ಇರುತ್ತಿದ್ದರು. ಇಶಾಂತ್ ಶರ್ಮಾ ಅವರೊಂದಿಗೆ ನಾನು ಆಡಿದ್ದೇನೆ. ಅವರು 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಉತ್ತಮ ಅನುಭವ. ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆಯಬೇಕೆಂಬುದು ನನ್ನ ಕನಸು. ಅವಕಾಶ ಸಿಕ್ಕಾಗೆಲ್ಲಾ ನಾನು ಶ್ರಮಿಸುತ್ತೇನೆ" ಎಂದಿದ್ದಾರೆ ಆರ್ಸಿಬಿ ತಂಡದ ವೇಗಿ.