ಅಬುದಾಬಿ, ಸೆಪ್ಟೆಂಬರ್ 20: 14ನೇ ಆವೃತ್ತಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಐಪಿಎಲ್: ಕೊಹ್ಲಿ ರಾಜೀನಾಮೆ ನಂತರ ಆರ್ಸಿಬಿ ನಾಯಕ ಯಾರು? ರೇಸ್ನಲ್ಲಿದ್ದಾರೆ ಈ 3 ಆಟಗಾರರು
ಇನ್ನು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಬ್ಬರು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶ್ರೀಕರ್ ಭರತ್ ಹಾಗೂ ವನಿಂದು ಹಸರಂಗ ಆಡುವ ಬಳಗಕ್ಕೆ ಸೇರಿಕೊಂಡಿದ್ದಾರೆ. ಉಳಿದಂತೆ ಆರ್ಸಿಬಿ ತಂಡದ ಸಾಮಾನ್ಯ ಆಡುವ ಬಳಗವೇ ಕಣಕ್ಕಿಳಿದಿದೆ.
ಇನ್ನು ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯ ಐಪಿಎಲ್ನ 200ನೇ ಪಂದ್ಯವಾಗಿದೆ. ಆದರೆ ಆರ್ಸಿಬಿ ನಾಯಕನ ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಉತ್ತಮ ಕೊಡುಗೆ ನೀಡಲು ವಿಫಲವಾಗಿದ್ದಾರೆ. ಕೇವಲ 5 ರನ್ಗಳಿಸಿದ ವೇಳೆ ವಿರಾಟ್ ಕೊಹ್ಲಿ ಕನ್ನಡಿಗ ಯುವ ವೇಗಿ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಔಟಾಗಿದ್ದಾರೆ.
ಕೊಲ್ಕತ್ತಾ ನೈಟ್ ರೂಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 92 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ತನ್ನ 6ನೇ ಕನಿಷ್ಠ ಮೊತ್ತವನ್ನು ಆರ್ಸಿಬಿ ದಾಖಲಿಸಿದೆ. ಈವರೆಗೆ ಮೂರಕ್ಕಿಂತ ಕಡಿಮೆ ಮೊತ್ತವನ್ನು ಗಳಿಸಿದ 7 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವೇ ಎದುರಾಳಿಯಾಗಿತ್ತು. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸಾಧನೆಯನ್ನು ಎರಡು ಬಾರಿ ಮಾಡಿದ್ದರೆ ರಾಜಸ್ಥಾನ್ ರಾಯಲ್ಸ್, ಪುಣ ಸೂಪರ್ಜೈಂಟ್ಸ್ ತಂಡ ತಲಾ ಒಂದೊಂದು ಬಾರಿ ಎರಡಂಕಿಗೆ ಆರ್ಸಿಬಿ ತಂಡವನ್ನು ಕಟ್ಟುಹಾಕುವಲ್ಲಿ ವಿಫಲವಾಗಿತ್ತು.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು ಗಳಿಸಿದ ಅಪಕೀರ್ತಿಯೂ ಆರ್ಸಿಬಿ ತಂಡಕ್ಕಿದೆ. 2017ರಲ್ಲಿ 49 ರನ್ಗಳಿಗೆ ಆಲೌಟ್ ಆಗುವ ಮೂಲಕ ಈ ಕೆಟ್ಟ ದಾಖಲೆಯನ್ನು ವಿರಾಟ್ ಕೊಹ್ಲಿ ಬಳಗ ಹೊಂದಿದೆ. ವಿಚಿತ್ರವೆಂದರೆ ಅಂದು ಕೂಡ ಆರ್ಸಿಬಿ ತಂಡಕ್ಕೆ ಎದುರಾಳಿಯಾಗಿದ್ದ ತಂಡ ಮತ್ತದೇ ಕೊಲ್ಕತ್ತಾ ನೈಟ್ ರೈಡರ್ಸ್.
ಕೊಹ್ಲಿ ನಾಯಕತ್ವ ಬಿಟ್ಟುಕೊಡಬೇಕಾದ ಅಗತ್ಯವೇ ಇರಲಿಲ್ಲ, ಯಾಕೆ ಈ ನಿರ್ಧಾರ?; ದಿಗ್ಗಜ ಕ್ರಿಕೆಟಿಗನ ಬೇಸರ
ಇನ್ನು ಇಂದಿನ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದಿರುವುದು ಮಾತ್ರವೇ ಶುಭ ಸುದ್ದಿ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ ಆರ್ಸಿಬಿ ತಂಡ ಸತತವಾಗಿ ಆಘಾತವನ್ನು ಅನುಭವಿಸಿದೆ. ಆರಂಬಿಕನಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ 5 ರನ್ಗಳನ್ನು ಗಳಿಸಿ ಔಟ್ ಆಗುವ ಮೂಲಕ ತಂಡದ ಕುಸಿತ ಆರಂಭವಾಗಿತ್ತು. ಬಳಿಕ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರು.
ನಾಯಕ ವಿರಾಟ್ ಕೊಹ್ಲಿ 5 ರನ್ಗಳಿಸಿದರೆ ದೇವದತ್ ಪಡಿಕ್ಕಲ್ 22 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಚೊಚ್ಚಲ ಪಂದ್ಯವನ್ನಾಡಿದ ಶ್ರೀಕರ್ ಭರತ್ 16 ರನ್ಗಳಿಗೆ ಆಟವನ್ನು ಮುಗಿಸಿದರು. ನಂತರ ಬ್ಯಾಟಿಂಗ್ಗೆ ಇಳಿದ ಎಬಿ ಡಿವಿಲಿಯರ್ಸ್ ಎದುರಿಸಿದ ಮೊದಲ ಎಸೆತಕ್ಕೇ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ನಂತರ ಸಚಿನ್ ಬೇಬಿ, ವನಿಂದು ಹಸರಂಗ, ಕೈಲ್ ಜಾಮಿಸನ್, ಹರ್ಷಲ್ ಪಟೇಲ್ ಕೂಡ ನಿರಾಸೆ ಮೂಡಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 22 ರನ್ಗಳಿಸಿದ ದೇವದತ್ ಪಡಿಕ್ಕಲ್ ಹೈಯೆಸ್ಟ್ ಸ್ಕೋರರ್ ಎನಿಸಿದ್ದಾರೆ.
ಎರಡು ತಂಡಗಳ ಆಡುವ ಬಳಗ ಹೀಗಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್, ವನಿಂದು ಹಸರಂಗ, ಸಚಿನ್ ಬೇಬಿ, ಕೈಲ್ ಜೇಮೀಸನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್
ಐಪಿಎಲ್: ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯ ವೀಕ್ಷಿಸಿದ ನಟ ಕಿಚ್ಚ ಸುದೀಪ್ ದಂಪತಿ
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಶುಬ್ಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುನೀಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ