ರಿಷಭ್ ಪಂತ್ ಧೋನಿಯನ್ನೇ ಮೀರಿಸುವಂತಹ ನಾಯಕ
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ವೀರೇಂದ್ರ ಸೆಹ್ವಾಗ್ ಎಂ ಎಸ್ ಧೋನಿ ಮತ್ತು ರಿಷಭ್ ಪಂತ್ ನಾಯಕತ್ವದ ಕುರಿತು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಿಷಭ್ ಪಂತ್ ನಾಯಕತ್ವವನ್ನು ವೀಕ್ಷಿಸಿದ ಎಂಎಸ್ ಧೋನಿಗೆ ಈತ ಗುರುವನ್ನೇ ಮೀರಿಸುವಂತಹ ಶಿಷ್ಯ ಎಂದೆನಿಸದೇ ಇರಲಾರದು ಎಂದಿದ್ದಾರೆ. ಈ ಹಿಂದೆ ಎಂ ಎಸ್ ಧೋನಿ ರಿಷಭ್ ಪಂತ್ ಅವರಿಗೆ ಸಲಹೆಗಳನ್ನು ನೀಡುತ್ತಾ, ಯಾವ ರೀತಿ ತಂಡವನ್ನು ನಿಭಾಯಿಸಬೇಕು ಎಂಬುದನ್ನು ಕಲಿಸಿಕೊಟ್ಟಿದ್ದರು. ಆದರೆ ಇದೀಗ ರಿಷಭ್ ಪಂತ್ ಅವರ ಉತ್ತಮವಾದ ಜಾಣ್ಮೆಯ ನಾಯಕತ್ವವನ್ನು ನೋಡಿ ಎಂಎಸ್ ಧೋನಿಗೆ ಈತ ತನಗೆ ನಾಯಕತ್ವ ಕಲಿಸಿಕೊಟ್ಟ ಗುರುವನ್ನೇ ಮೀರಿಸುವಂತಹ ಶಿಷ್ಯನಾಗಿದ್ದಾನೆ ಎನಿಸುವುದು ಖಚಿತ ಎಂದಿದ್ದಾರೆ.
ವಿರೇಂದ್ರ ಸೆಹ್ವಾಗ್ ಹೇಳಿಕೆ ಸೃಷ್ಟಿಸುತ್ತಿದೆ ವಿವಾದ
ರಿಷಭ್ ಪಂತ್ ಐಪಿಎಲ್ ತಂಡವೊಂದರ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಎಂಎಸ್ ಧೋನಿ 3 ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ ಮತ್ತು ಅಂತರರಾಷ್ಟ್ರೀಯ ನಾಯಕನಾಗಿ ಧೋನಿ ಮಾಡಿರುವ ಸಾಧನೆ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯತೆ ಇಲ್ಲ. ಹೀಗೆ ನಾಯಕತ್ವದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿರುವ ಎಂಎಸ್ ಧೋನಿ ಅವರ ನಾಯಕತ್ವಕ್ಕಿಂತ ಇದೇ ಮೊದಲ ಬಾರಿಗೆ ನಾಯಕತ್ವವನ್ನು ವಹಿಸಿಕೊಂಡಿರುವ ರಿಷಭ್ ಪಂತ್ ಅವರ ನಾಯಕತ್ವ ಉತ್ತಮ ಎನ್ನುವುದು ಸರಿಯಲ್ಲ ಎಂದು ಧೋನಿ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ಚೆನ್ನೈ ಸೋಲಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಅಕ್ಟೋಬರ್ 4ರ ಸೋಮವಾರದಂದು ನಡೆದ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 3 ವಿಕೆಟ್ಗಳ ಜಯವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ತನ್ನ ಹತ್ತನೇ ಗೆಲುವನ್ನು ಪಡೆದುಕೊಂಡು ಅಗ್ರಸ್ಥಾನಕ್ಕೇರಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.