ಐಪಿಎಲ್ 14ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ನಾಯಕನನ್ನು ಬದಲಾಯಿಸಿತು. ಸಂಜು ಸ್ಯಾಮ್ಸನ್ ಅವರಿಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಯಿತು. ಈ ಬಾರಿಯ ಐಪಿಎಲ್ ಟೂರ್ನಿಯನ್ನು ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ರನ್ಗಳ ಸೋಲನ್ನು ಅನುಭವಿಸುವುದರ ಮೂಲಕ ಶುರುಮಾಡಿದ ರಾಜಸ್ಥಾನ್ ರಾಯಲ್ಸ್ ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿದ್ದು 2 ಪಂದ್ಯಗಳಲ್ಲಿ ಜಯಗಳಿಸಿ 3 ಪಂದ್ಯಗಳಲ್ಲಿ ಸೋಲುಂಡಿದೆ. ರಾಜಸ್ಥಾನ್ ರಾಯಲ್ಸ್ ಯೋಜನೆಯಂತೆ ಈ ಬಾರಿಯ ಟೂರ್ನಿ ನಡೆದಂತೆ ಕಾಣುತ್ತಿಲ್ಲ. ತಂಡದ ಪ್ರಮುಖ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ತಂಡದಲ್ಲಿ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದದ್ದು ಒಂದೆಡೆಯಾದರೆ, ಮತ್ತೊಂದೆಡೆ ತಂಡದಲ್ಲಿಯೇ ಇರುವ ಮತ್ತಷ್ಟು ಆಟಗಾರರು ಕಳಪೆ ಫಾರ್ಮ್ನಲ್ಲಿದ್ದಾರೆ. ಇದೇ ಮೊದಲ ಬಾರಿಗೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ಹೊತ್ತಿರುವ ಸಂಜು ಸ್ಯಾಮ್ಸನ್ ನಾಯಕತ್ವ ಅಷ್ಟೇನೂ ಯಶಸ್ವಿಯಾದಂತೆ ಕಾಣಿಸುತ್ತಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಕುರಿತು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಮಾತನಾಡಿದ್ದು ರಾಜಸ್ಥಾನ್ ರಾಯಲ್ಸ್ ನನಗೆ ಒಂದು ತಂಡದಂತೆ ಕಾಣುತ್ತಿಲ್ಲ ಬದಲಾಗಿ 11 ಪ್ರತ್ಯೇಕ ವ್ಯಕ್ತಿಗಳಂತೆ ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಗ್ಯಾನ್ ಓಝಾ ಅವರ ಈ ಹೇಳಿಕೆಯನ್ನು ಸ್ವಾಗತಿಸಿದ ವಿರೇಂದ್ರ ಸೆಹ್ವಾಗ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸಂಜು ಸ್ಯಾಮ್ಸನ್ ನಾಯಕನಾಗಿರುವುದು ಆ ತಂಡದ ಆಟಗಾರರಿಗೇ ಇಷ್ಟವಿಲ್ಲದಂತೆ ಕಾಣುತ್ತಿದೆ ಎಂದು ಸೆಹವಾಗ್ ಹೇಳಿದರು.
ತನ್ನ ಪಾಡಿಗೆ ತಾನು ಉತ್ತಮ ಆಟವಾಡುತ್ತಿದ್ದ ಶಾಂತ ಸ್ವಭಾವದ ಆಟಗಾರರನ್ನು ದಿಢೀರನೇ ನಾಯಕನಾಗಿ ಮಾಡಿದರೆ ತಂಡದ ಸಹ ಆಟಗಾರರ ತಪ್ಪನ್ನು ತಿದ್ದುವಷ್ಟು ಸಾಮರ್ಥ್ಯ ಆತನಲ್ಲಿರುವುದಿಲ್ಲ, ಸಂಜು ಸ್ಯಾಮ್ಸನ್ ವಿಚಾರದಲ್ಲಿಯೂ ಸಹ ಅದೇ ನಡೆಯುತ್ತಿದೆ ಸಹ ಆಟಗಾರರ ಮೇಲೆ ಸಂಜು ಸ್ಯಾಮ್ಸನ್ ಹೆಚ್ಚಾಗಿ ಹಿಡಿತ ಸಾಧಿಸಲು ಆಗುತ್ತಿಲ್ಲ ಎಂದು ತಿಳಿಸಿದರು. ಆಟಗಾರರು ತಪ್ಪು ಮಾಡಿದಾಗ ಅದನ್ನು ತಿದ್ದಿ ಸರಿಪಡಿಸುವ ಬದಲು ಅದಕ್ಕೆ ನಾಯಕನೇ ಹೊಂದಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ಬಿಚ್ಚಿಟ್ಟರು.