ಶನಿವಾರ ( ಏಪ್ರಿಲ್ 17 ) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಸೆಣಸಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ 13 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತು.
151 ರನ್ಗಳ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿತು. ಆರಂಭಿಕರಾಗಿ ಬಂದ ಜಾನಿ ಬೈರ್ಸ್ಟೋವ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭವನ್ನು ನೀಡಿದರು. ಡೇವಿಡ್ ವಾರ್ನರ್ 34 ಎಸೆತಗಳಿಗೆ 36 ರನ್ ಮತ್ತು ಜಾನಿ ಬೈರ್ಸ್ಟೋವ್ 22 ಎಸೆತಗಳಿಗೆ 43 ರನ್ಗಳನ್ನು ಗಳಿಸಿ, 67 ರನ್ಗಳ ಜತೆಯಾಟವನ್ನು ಸಹ ನೀಡಿದರು. ಇಷ್ಟೆಲ್ಲಾ ಉತ್ತಮ ಆರಂಭ ಪಡೆದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ 151 ರನ್ ಗುರಿ ತಲುಪದೇ 19.4 ಓವರ್ಗಳಲ್ಲಿ 137 ರನ್ಗಳಿಗೆ ಆಲ್ಔಟ್ ಆಗಿದ್ದು ಎಲ್ಲರಲ್ಲಿಯೂ ಆಶ್ಚರ್ಯವನ್ನು ಮೂಡಿಸಿತ್ತು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಈ ಸೋಲಿನ ಕುರಿತು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಕೂಡ ಪ್ರತಿಕ್ರಿಯಿಸಿದ್ದು ಈ ಮೂವರು ಆಟಗಾರರು ತಂಡದಲ್ಲಿದ್ದರೆ ಮುಂಬೈ ವಿರುದ್ಧ ಗೆಲ್ಲಲು ಅನರ್ಹ ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಟೀಕಿಸಿದ್ದಾರೆ. ಅಭಿಷೇಕ್ ಶರ್ಮಾ, ವಿರಾಟ್ ಸಿಂಗ್ ಮತ್ತು ಖಲೀಲ್ ಅಹ್ಮದ್ ಈ ಮೂವರು ಆಟಗಾರರು ತಂಡದಲ್ಲಿದ್ದರೆ ಆ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲು ಅನರ್ಹ ಎಂದು ಸಂಜಯ್ ಮಂಜ್ರೇಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.