ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವದ ಜವಾಬ್ಧಾರಿಯನ್ನು ಯುವ ಆಟಗಾರ ಸಂಜು ಸ್ಯಾಮ್ಸನ್ ವಹಿಸಿಕೊಂಡಿದ್ದಾರೆ. ಆದರೆ ಆಡಿದ ಮೂರು ಪಂದ್ಯಗಳ್ಲಲಿ ಎರಡು ಸೋಲು ಕಂಡಿರುವುದು ತಂಡಕ್ಕೆ ಹಿನ್ನಡೆಯನ್ನು ಉಂಟು ಮಾಡಿದೆ. ವೈಯಕ್ತಿಕವಾಗಿಯೂ ಸಂಜು ಸ್ಯಾಮ್ಸನ್ ಆರಂಭಿಕ ಪಂದ್ಯದಲ್ಲಿ ಸ್ಮರಣೀಯ ಪ್ರದರ್ಶನ ನೀಡಿದರಾದರೂ ಬಳಿಕ ಸತತ ಎರಡು ಪಂದ್ಯಗಳಲ್ಲಿ ವೈಫಲ್ಯವನ್ನು ಕಂಡರು. ಇದು ತಂಡದ ವೈಫಲ್ಯಕ್ಕೂ ಕಾರಣವಾಯಿತು.
ಸಂಜು ಸ್ಯಾಮ್ಸನ್ ಅವರ ಈ ಅಸ್ಥಿರ ಪ್ರದರ್ಶನ ಈ ಹಿಂದಿನ ಆವೃತ್ತಿಯಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಭಾರತೀಯ ಮಹಿಳಾ ತಂಡದ ಮಾಜಿ ನಾಯಕ ಅಂಜುಂ ಚೋಪ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುವ ವಿಚಾರದಲ್ಲಿ ಸಂಜು ಸ್ಯಾಮ್ಸನ್ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅವರನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂದಿದ್ದಾರೆ.
ಐಪಿಎಲ್ 2021: ಬೆಂಗಳೂರು vs ರಾಜಸ್ಥಾನ್ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?
"ಕಳೆದ ಕೆಲ ವರ್ಷಗಳಿಂದ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ನ ಒಂದೇ ಸಮಸ್ಯೆ ಅಸ್ಥಿರತೆ. ಆಟದ ವಿಚಾರವಾಗಿ ಆತನಲ್ಲಿ ಯಾವುದೇ ಕೊರತೆಯಿಲ್ಲ. ಆದರೆ ಆತ ಸ್ಥಿರತೆಯನ್ನು ಕಂಡುಕೊಳ್ಳುವ ಮನಸ್ಥಿತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ" ಎಂದು ಅಂಜುಂ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.
"ಸಾಕಷ್ಟು ವಿಶ್ಲೇಷಣೆಗಳು ನಡೆದ ನಂತರವೂ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಖ್ಯಾತರಾಗಲು ಸ್ಥಿರ ಪ್ರದರ್ಶನವೇ ಕಾರಣ. ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೂ ಒಂದೇ ರೀತಿಯ ಸೌಲಭ್ಯಗಳನ್ನು ನೀಡಲಾಗಿರುತ್ತದೆ. ಆದರೆ ಒಮ್ಮೆ ಆಟಗಾರ ಅಂಗಳಕ್ಕೆ ಇಳಿದರೆ ಆತ ಗಳಿಸುವ ರನ್ಗಳಿಗೆ ಆತನೇ ಜವಾಬ್ಧಾರ" ಎಂದಿದ್ದಾರೆ ಅಂಜುಂ ಚೋಪ್ರ.