14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಐದನೇ ಪಂದ್ಯ ಮಂಗಳವಾರ ( ಏಪ್ರಿಲ್ 13 ) ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಿತು. ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡ ನಿರ್ಧಾರ ಸರಿಯಾಗಿಯೇ ಇತ್ತು ಏಕೆಂದರೆ ಮುಂಬೈ ತಂಡ 20 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್ ನೀಡಿದ 153 ರನ್ಗಳ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿತೀಶ್ ರಾಣಾ ಮತ್ತು ಶುಭ್ಮನ್ ಗಿಲ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಒಳ್ಳೆಯ ಆರಂಭ ಪಡೆದುಕೊಂಡಿತು. 31 ಎಸೆತಗಳಿಗೆ 31 ರನ್ ಬೇಕಿರುವಾಗಲೂ ಸಹ ಕೊಲ್ಕತ್ತಾ ನೈಟ್ ರೈಡರ್ಸ್ ಕೈನಲ್ಲಿ 7 ವಿಕೆಟ್ಗಳಿದ್ದವು. ಆದರೆ ಕೊನೆಯಲ್ಲಿ ನಡೆದಿದ್ದೇ ಬೇರೆ ಗೆಲುವಿನ ಹಾದಿಯಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 10 ರನ್ಗಳ ಸೋಲು ಕಂಡಿತು. ಕೊನೆಯ 5 ಓವರ್ಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗಳಿಸಿದ್ದು ಕೇವಲ 20 ರನ್ ಮಾತ್ರ. ಎಲ್ಲಾ ಓವರ್ಗಳು ಮುಗಿಯುವ ಹೊತ್ತಿಗೆ ಕೊಲ್ಕತ್ತಾ ಗಳಿಸಿದ್ದು 7 ವಿಕೆಟ್ ನಷ್ಟಕ್ಕೆ 142 ರನ್ ಮಾತ್ರ. ಹೀಗೆ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಡಿಕಾರಲು ಆರಂಭಿಸಿದರು.
ಈ ಸಲುವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರುಗಳಲ್ಲೊಬ್ಬರಾದ ಬಾಲಿವುಡ್ ನಟ ಶಾರೂಖ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನೀರಸ ಪ್ರದರ್ಶನ ತೋರಿದ್ದಕ್ಕಾಗಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತಿದ್ದೇವೆ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.