ವಿರಾಟ್ ಕೊಹ್ಲಿ ಹಲವಾರು ಯುವ ಆಟಗಾರರು ಕಳಪೆ ಫಾರ್ಮ್ನಲ್ಲಿದ್ದಾಗ ಅವರ ಬೆಂಬಲಕ್ಕೆ ನಿಂತು ಉತ್ತಮ ಪ್ರದರ್ಶನ ನೀಡುವ ಹಾಗೆ ಮಾಡಿದ್ದಾರೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಸಹ ಅದನ್ನೆಲ್ಲಾ ತಲೆಗೆ ಹಾಕಿಕೊಳ್ಳದೆ ಯುವ ಆಟಗಾರರ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ಕೊಹ್ಲಿ ಅವರನ್ನು ಬೆನ್ನು ತಟ್ಟಿ ಮುನ್ನಡೆಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್. ಮೊದಲಿಗೆ ಕಳಪೆ ಪ್ರದರ್ಶನ ತೋರುತ್ತಿದ್ದ ಮೊಹಮ್ಮದ್ ಸಿರಾಜ್ ಇಂದು ಪ್ರಮುಖ ಬೌಲರ್ ಆಗಿದ್ದಾರೆ ಎಂದರೆ ಅದಕ್ಕೆ ಕಾರಣ ವಿರಾಟ್ ಕೊಹ್ಲಿ ನೀಡಿದ ಬೆಂಬಲ.
ಮೊಹಮ್ಮದ್ ಸಿರಾಜ್ ನಂತರ ವಿರಾಟ್ ಕೊಹ್ಲಿ ಮತ್ತೊಬ್ಬ ಯುವ ಆಟಗಾರನ ಬೆಂಬಲಕ್ಕೆ ನಿಂತು ಆತ ಯಶಸ್ವಿ ಆಟಗಾರ ಎನಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ತನ್ನ ಐಪಿಎಲ್ ಜೀವನವನ್ನು ಆರಂಭಿಸಿದ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ವಿಚಾರದಲ್ಲಿ ವಿರಾಟ್ ಕೊಹ್ಲಿ ತೋರಿದ ಬೆಂಬಲದ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಸೈಮನ್ ಕಾಟಿಚ್ ತಿಳಿಸಿದ್ದಾರೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರನಾಗಿ ದೇವದತ್ ಪಡಿಕ್ಕಲ್ (473 ರನ್) ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿ ಉತ್ತಮ ಹೆಸರು ಮಾಡಿದರೂ ಸಹ ದೇವದತ್ ಪಡಿಕ್ಕಲ್ ಹೆಚ್ಚು ಹೊತ್ತು ಬ್ಯಾಟ್ ಮಾಡುವ ಸಮಸ್ಯೆಯಿಂದ ಬಳಲುತ್ತಿದ್ದರು. 20-30 ಎಸೆತಗಳನ್ನು ಎದುರಿಸುವಷ್ಟರಲ್ಲಿ ಪಡಿಕ್ಕಲ್ ತೀವ್ರ ಸುಸ್ತಾಗಿ ವಿಕೆಟ್ ಒಪ್ಪಿಸಿಬಿಡುತ್ತಿದ್ದರು.
ದೇವದತ್ ಪಡಿಕ್ಕಲ್ ಎದುರಿಸುತ್ತಿದ್ದ ಈ ಸಮಸ್ಯೆಯನ್ನು ಬಗೆಹರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿಯವರಿಗೆ ಕೇಳಿಕೊಂಡಿತು. ಪಡಿಕ್ಕಲ್ ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸಲು ಮುಂದಾದ ವಿರಾಟ್ ಕೊಹ್ಲಿ 2020ರ ಐಪಿಎಲ್ ಟೂರ್ನಿ ಮುಗಿದ ಬಳಿಕ ಫಿಟ್ನೆಸ್ ಕಡೆ ಹೆಚ್ಚಿನ ಗಮನ ಹರಿಸುವಂತೆ ಪಡಿಕ್ಕಲ್ ಅವರನ್ನು ವಿರಾಟ್ ಪ್ರೇರೇಪಿಸಿದ್ದರು. ವಿರಾಟ್ ಕೊಟ್ಟ ಸಲಹೆಗಳನ್ನು ಸರಿಯಾದ ರೀತಿ ಅನುಸರಿಸಿದ ದೇವದತ್ ಪಡಿಕ್ಕಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಬೇಗ ಸುಸ್ತಾಗದೆ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಪಡಿಕ್ಕಲ್ ಅವರ ಬ್ಯಾಟಿಂಗ್ನಲ್ಲಿ ಉಂಟಾಗಿರುವ ಮಹತ್ವದ ಬದಲಾವಣೆಗೆ ವಿರಾಟ್ ಕೊಹ್ಲಿ ಅವರ ಸಲಹೆಯೇ ಕಾರಣ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಸೈಮನ್ ಕಾಟಿಚ್ ತಿಳಿಸಿದರು