ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಪ್ರದರ್ಶನವನ್ನು ನೀಡುತ್ತಿಲ್ಲ. ಸಾಲು ಸಾಲು ಸೋಲಿನಿಂದ ಕಂಗೆಟ್ಟ ಸನ್ ರೈಸರ್ಸ್ ಹೈದರಾಬಾದ್ ತಂಡದ ಮ್ಯಾನೇಜ್ಮೆಂಟ್ ಪಂದ್ಯವನ್ನು ಗೆಲ್ಲಲು ಸಾಕಷ್ಟು ತಂತ್ರಗಳನ್ನು ಹೆಣೆದರೂ ಸಹ ಗೆಲುವಿನ ದರ್ಶನ ಆಗುತ್ತಿಲ್ಲ. ಡೇವಿಡ್ ವಾರ್ನರ್ ನಾಯಕತ್ವದಲ್ಲಿ 6 ಪಂದ್ಯಗಳನ್ನಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ ಒಂದು ಪಂದ್ಯದಲ್ಲಿ ಜಯಗಳಿಸಿ 5 ಪಂದ್ಯಗಳಲ್ಲಿ ಮುಗ್ಗರಿಸಿತ್ತು. ಡೇವಿಡ್ ವಾರ್ನರ್ ಅವರ ಕಳಪೆ ನಾಯಕತ್ವದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಸಾಲು ಸಾಲು ಪಂದ್ಯಗಳನ್ನು ಕೈಚೆಲ್ಲುತ್ತಿದೆ ಎಂಬ ರೀತಿ ನಾಯಕತ್ವವನ್ನು ಡೇವಿಡ್ ವಾರ್ನರ್ರಿಂದ ಕಸಿದು ಕೇನ್ ವಿಲಿಯಮ್ಸನ್ ಹೆಗಲಿಗೆ ಹಾಕಲಾಯಿತು.
ಆದರೆ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿಯೂ ಸನ್ ರೈಸರ್ಸ್ ಹೈದರಾಬಾದ್ ತಂಡ ಗೆಲುವಿನ ಲಯಕ್ಕೆ ಮರಳಲಿಲ್ಲ. ಭಾನುವಾರ (ಮೇ 2) ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ಎದುರಿಗೆ 55 ರನ್ಗಳ ಹೀನಾಯ ಸೋಲನ್ನು ಕಂಡು ಮುಖಭಂಗ ಅನುಭವಿಸಿತು. ನಾಯಕತ್ವವನ್ನು ವಹಿಸಿಕೊಂಡ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದು ಮಾತ್ರವಲ್ಲದೆ ನಾಯಕತ್ವದಲ್ಲಿಯೂ ಸಹ ಎಡವಿದರು. ವಿಲಿಯಮ್ಸನ್ ರಿವ್ಯೂ ಒಂದನ್ನು ದುರುಪಯೋಗ ಮಾಡಿದ್ದು ಹಾಗೂ ಬ್ಯಾಟಿಂಗ್ನಲ್ಲಿ ಫ್ಲಾಪ್ ಆಗಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೈದರಾಬಾದ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಟೀಕಿಸುತ್ತಿದ್ದಾರೆ.
ಕೇವಲ ಒಂದಷ್ಟು ಪಂದ್ಯಗಳಲ್ಲಿ ವಿಫಲರಾದ ಕಾರಣಕ್ಕೆ ವಾರ್ನರ್ ಅವರನ್ನು ನಾಯಕತ್ವದಿಂದ ಇಳಿಸಿ ಪಂದ್ಯದಿಂದ ಹೊರ ಹಾಕಿದ್ದು ಎಷ್ಟು ಸರಿ? ರಾಜಸ್ಥಾನ್ ವಿರುದ್ಧ ವಾರ್ನರ್ ಇದ್ದಿದ್ದರೆ ಇಷ್ಟೊಂದು ಹೀನಾಯ ರೀತಿಯಲ್ಲಿ ಸೋಲನ್ನು ಕಾಣುತ್ತಿರಲಿಲ್ಲ ಎಂದು ಹೈದರಾಬಾದ್ ಅಭಿಮಾನಿಗಳು ಕೇನ್ ವಿಲಿಯಮ್ಸನ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಬೇರೆ ತಂಡಗಳಲ್ಲಿ ನಾಯಕರು ಕಳಪೆ ಪ್ರದರ್ಶನ ನೀಡಿದಾಗ ಅವರೂ ಸಹ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ವಾರ್ನರ್ರನ್ನು ನಾಯಕತ್ವದಿಂದ ವಜಾಗೊಳಿಸಿ ವಿಲಿಯಮ್ಸನ್ ಅವರನ್ನು ನಾಯಕನನ್ನಾಗಿ ನೇಮಿಸಿದ್ದರೂ ಸಹ ಗೆಲುವನ್ನು ಕಾಣಲಿಲ್ಲ, ರಾಜಸ್ಥಾನ್ ವಿರುದ್ಧದ ಹೀನಾಯ ಸೋಲಿಗೆ ವಾರ್ನರ್ ಅನುಪಸ್ಥಿತಿಯೇ ಪ್ರಮುಖ ಕಾರಣ. ಮೊದಲು ನಿಮ್ಮ ತಂಡದಲ್ಲಿ ಈ ರೀತಿಯ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವವರನ್ನು ವಜಾ ಮಾಡಿ ಎಂದು ಹೈದರಾಬಾದ್ ತಂಡದ ಅಭಿಮಾನಿಗಳು ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.