14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 9ನೇ ಪಂದ್ಯವದು. ಆ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಣಸಾಡಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. 151 ರನ್ಗಳ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 137 ರನ್ ಗಳಿಸಿ 13 ರನ್ಗಳ ಹೀನಾಯವಾಗಿ ಸೋಲುವುದರ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಪಂದ್ಯವನ್ನು ಕೈಚೆಲ್ಲಿತ್ತು.
ಈ ಪಂದ್ಯ ಮುಗಿದ ಬಳಿಕ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವ ಆಟಗಾರರನ್ನು ಟೀಕಿಸಿದ್ದರು. ವಿರಾಟ್ ಸಿಂಗ್, ಅಭಿಷೇಕ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಈ ಮೂವರು ಆಟಗಾರರು ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರೆ ಗೆಲುವು ಅಸಾಧ್ಯ ಎಂದು ಹೇಳಿದ್ದರು. ಸಂಜಯ್ ಮಂಜ್ರೇಕರ್ ಈ ರೀತಿಯ ಟೀಕೆ ಮಾಡಿದ ನಂತರದ ಪಂದ್ಯದಲ್ಲಿಯೇ ಯುವ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಸಂಜಯ್ ಮಂಜ್ರೇಕರ್ ಟೀಕೆಗೆ ಉತ್ತರವನ್ನು ನೀಡಿದ್ದಾರೆ.
ಬುಧವಾರ ( ಏಪ್ರಿಲ್ 21 ) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಾದ ಅಭಿಷೇಕ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಆಕರ್ಷಕ ಬೌಲಿಂಗ್ ಮಾಡಿ ಮಿಂಚಿದರು. ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದುಕೊಂಡರೆ, ಖಲೀಲ್ ಅಹ್ಮದ್ 3 ವಿಕೆಟ್ ಪಡೆದು ಮಿಂಚಿದರು. ಸದ್ಯ ಇವರಿಬ್ಬರ ಆಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಸಂಜಯ್ ಮಂಜ್ರೇಕರ್ ಅವರು ಟೀಕಿಸುವಾಗ ಸ್ವಲ್ಪ ತಾಳ್ಮೆಯಿಂದ ಯೋಚಿಸಬೇಕು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.