ಸೂರ್ಯಕುಮಾರ್ ಯಾದವ್ ಬಗ್ಗೆ ತಪ್ಪಾದ ನಿರ್ಣಯ ತೆಗೆದುಕೊಂಡಿದ್ದೆ
ಸೂರ್ಯಕುಮಾರ್ ಯಾದವ್ ಬಗ್ಗೆ ತಪ್ಪಾದ ನಿರ್ಣಯವನ್ನು ತೆಗೆದುಕೊಂಡ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ. ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡ ಸೇರುವ ಮುನ್ನ 2014ರಿಂದ 2017ರವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದರು. ಈ ಸಂದರ್ಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್ ಸೂರ್ಯಕುಮಾರ್ ಯಾದವ್ ಅವರನ್ನು ಆರನೇ ಅಥವಾ ಏಳನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸುತ್ತಿದ್ದರಂತೆ. 'ಸೂರ್ಯ ಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಆಡಬೇಕಾದಂತಹ ಪ್ರತಿಭಾವಂತ ಬ್ಯಾಟ್ಸ್ಮನ್, ಆದರೆ ಆತನನ್ನು ನಾನು ಆರನೇ ಅಥವಾ ಏಳನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಕೆಳಗಿಳಿಸುತ್ತಿದ್ದೆ. ಆತನನ್ನು ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಸಿದ್ದಿದ್ದರೆ ತುಸು ಮುಂಚೆಯೇ ಅಂತಾರಾಷ್ಟ್ರೀಯ ತಂಡ ಪ್ರತಿನಿಧಿಸುವಷ್ಟು ಬೆಳೆಯುತ್ತಿದ್ದ. ಹೀಗಾಗಿ ಆತನನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಬದಲು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಸುತ್ತಿದ್ದ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ' ಎಂದು ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.
ಆ ಇಬ್ಬರು ತಂಡದಲ್ಲಿ ಇದ್ದ ಕಾರಣ ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಲಾಗುತ್ತಿರಲಿಲ್ಲ
ಗಂಭೀರ್ ನಾಯಕತ್ವದಲ್ಲಿ ಸೂರ್ಯಕುಮಾರ್ ಯಾದವ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದಾಗ ತಂಡದಲ್ಲಿ ಮನೀಷ್ ಪಾಂಡೆ ಮತ್ತು ಯೂಸುಫ್ ಪಠಾಣ್ ಕೂಡ ಇದ್ದರು. ಹೀಗಾಗಿ ಸೂರ್ಯಕುಮಾರ್ ಯಾದವ್ ಬದಲು ಈ ಇಬ್ಬರನ್ನೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸುತ್ತಿದ್ದೆ, ಹೀಗಾಗಿ ಈ ಇಬ್ಬರನ್ನು ಬಿಟ್ಟು ಸೂರ್ಯಕುಮಾರ್ ಯಾದವ್ಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಲಿಲ್ಲ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ನನ್ನು ತಂಡದಿಂದ ಕೈಬಿಟ್ಟದ್ದು ಕೊಲ್ಕತ್ತಾಗೆ ದೊಡ್ಡ ನಷ್ಟ
ಇನ್ನೂ ಮುಂದುವರಿದು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈ ಬಿಟ್ಟ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಗೌತಮ್ ಗಂಭೀರ್ ಇಂತಹ ಅತ್ಯದ್ಭುತ ಆಟಗಾರನನ್ನು ತಂಡದಲ್ಲಿ ಇಟ್ಟುಕೊಳ್ಳದೆ ಕೈಬಿಟ್ಟದ್ದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ನಷ್ಟ ಎಂದು ಹೇಳಿಕೆ ನೀಡಿದ್ದಾರೆ. ಹೀಗೆ ಸೂರ್ಯಕುಮಾರ್ ಯಾದವ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೈಬಿಟ್ಟ ನಂತರ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತು. ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡ ಸೇರಿದ ನಂತರ ತಾನು ಎಂತಹ ಪ್ರತಿಭಾವಂತ ಆಟಗಾರ ಎಂಬುದನ್ನು ನಿರೂಪಿಸಿಕೊಂಡರು.