ಕೊರೊನಾ ತಡೆಯುವ ಮುಂಜಾಗ್ರತಾ ಕ್ರಮವಾಗಿ ಈ ಬದಲಾವಣೆ
ಸ್ಟೇಡಿಯಂನಿಂದ ಹೊರಗಡೆ ಹೋಗಿ ಬೀಳುವ ಚೆಂಡನ್ನು ಮತ್ತೆ ತಂದು ಅದಕ್ಕೆ ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಿದ ನಂತರ ಪುನಃ ಪಂದ್ಯಗಳಲ್ಲಿ ಬಳಸಲಾಗುತ್ತಿತ್ತು, ಹೀಗೆ ಮಾಡುವುದರಿಂದ ಕೊರೊನಾ ಸೋಂಕು ಹರಡುವ ಭಯ ಕೂಡ ಇತ್ತು. ಚೆಂಡು ಸ್ಟೇಡಿಯಂನಿಂದ ಹೊರಹೋಗಿ ಬಿದ್ದಾಗ ಹೊರಗಿನವರು ಯಾರಾದರೂ ಚೆಂಡನ್ನು ಮುಟ್ಟಿರುವ ಸಾಧ್ಯತೆಗಳಿತ್ತು, ಹೀಗೆ ಚೆಂಡನ್ನು ಮುಟ್ಟಿದವರಲ್ಲಿ ಕೊರೊನಾ ಸೋಂಕು ಇತ್ತಾ ಅಥವಾ ಇಲ್ಲವಾ ಎಂಬ ಗೊಂದಲದಲ್ಲಿಯೇ ಚೆಂಡನ್ನು ಸ್ವಚ್ಚಗೊಳಿಸಿ ಪುನಃ ಬಳಸಲಾಗುತ್ತಿತ್ತು. ಹೀಗಾಗಿ ಈ ಬಾರಿ ಆ ತರಹದ ಗೊಂದಲಗಳ ಜೊತೆ ಪಂದ್ಯ ನಡೆಸುವುದು ಬೇಡ ಮತ್ತು ಕೊರೊನಾ ತಡೆಯುವ ಮುಂಜಾಗ್ರತಾ ಕ್ರಮದಿಂದ ಬಿಸಿಸಿಐ ಸ್ಟೇಡಿಯಂನಿಂದ ಹೊರಹೋದ ಚೆಂಡನ್ನು ಬಳಸುವ ಬದಲು ಹೊಸ ಚೆಂಡನ್ನು ಬಳಸುವ ನಿಯಮವನ್ನು ಜಾರಿಗೆ ತಂದಿದೆ.
ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆ
ಈ ಬಾರಿ ದುಬೈನಲ್ಲಿ ಮುಂದುವರಿಯಲಿರುವ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಹೀಗಾಗಿ ಪ್ರೇಕ್ಷಕರು ಮೈದಾನಕ್ಕೆ ಬಂದಾಗ ಅವರ ಬಳಿ ಬಂದು ಬೀಳುವ ಚೆಂಡುಗಳನ್ನು ಮುಟ್ಟುವುದು ಸಾಮಾನ್ಯವಾಗಿರುತ್ತದೆ. ಹೀಗೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದ ಪ್ರೇಕ್ಷಕರಲ್ಲಿ ಸೋಂಕಿತರು ಇರಬಹುದು, ಹೀಗೆ ಸೋಂಕಿತರಿದ್ದರೆ ಅಂಥವರು ಚೆಂಡನ್ನು ಮುಟ್ಟುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಪ್ರೇಕ್ಷಕರ ಬಳಿ ಹೋಗಿ ಬೀಳುವ ಚೆಂಡನ್ನು ಸಹ ಮತ್ತೆ ಪಂದ್ಯಕ್ಕೆ ಬಳಸಬಾರದು ಎಂಬ ಬದಲಾವಣೆಯನ್ನು ಬಿಸಿಸಿಐ ಘೋಷಿಸಿದೆ.
ಚೆಂಡಿಗೆ ಎಂಜಲು ಸವರುವ ಹಾಗಿಲ್ಲ
ಇನ್ನು ಈ ಹಿಂದಿನ ಆವೃತ್ತಿಯಲ್ಲಿ ಇದ್ದ ಚೆಂಡಿಗೆ ಎಂಜಲು ಸವರುವ ಹಾಗಿಲ್ಲ ಎಂಬ ನಿಯಮ ಈ ಆವೃತ್ತಿಯಲ್ಲಿಯೂ ಮುಂದುವರಿಯಲಿದೆ. ಚೆಂಡು ಹೊಳೆಯಲಿ ಎಂಬ ಕಾರಣಕ್ಕೆ ಆಟಗಾರರು ಚೆಂಡಿಗೆ ಎಂಜಲು ಸವರುತ್ತಾರೆ. ಆದರೆ ಈ ಬಾರಿ ಕೂಡ ಆಟಗಾರರು ಚೆಂಡಿಗೆ ಎಂಜಲನ್ನು ಸವರುವಂತಿಲ್ಲ ಎಂದು ಬಿಸಿಸಿಐ ಹೇಳಿದೆ, ಒಂದುವೇಳೆ ಯಾರಾದರೂ ಚೆಂಡಿಗೆ ಎಂಜಲನ್ನು ಸವರಿದರೆ ಆ ಆಟಗಾರನ ತಂಡಕ್ಕೆ 5 ರನ್ಗಳ ಪೆನಾಲ್ಟಿಯನ್ನು ಹಾಕಲಾಗುವುದು.