ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಬದಲಾವಣೆ
ಈ ಬಾರಿಯ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ದುಸ್ವಪ್ನವಾಗಿದೆ. ಈವರೆಗೆ ಆಡಿದ ಎಲ್ಲಾ ಐಪಿಎಲ್ ಟೂರ್ನಿಯಲ್ಲಿ ಕನಿಷ್ಟ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಕಳಪೆ ಪ್ರದರ್ಶನದ ಮೂಲಕ ಲೀಗ್ ಹಂತದಿಂದ ಹೊರಬಿದ್ದ ಮೊದಲ ತಂಡವಾಗಿದೆ. ಹೀಗಾಗಿ ಮುಂದಿನ ಐಪಿಎಲ್ನಲ್ಲಿ ಚೆನ್ನೈ ಮ್ಯಾನೇಜ್ಮೆಂಟ್ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದೆ. ಯುವ ಆಟಗಾರರತ್ತ ಚಿತ್ತ ನೆಡಲಿದೆ. ಈ ಮೂಲಕ ತಮ್ಮ ಡ್ಯಾಡ್ಸ್ ಆರ್ಮಿ ಹಣೆಪಟ್ಟಿಯಿಂದ ಕಳಚಿಕೊಳ್ಳಲಿದೆ.
ಅಂಪಾಯರ್ಗಳ ತಪ್ಪು ನಿರ್ಣಯಗಳು
ಸಾಕಷ್ಟು ತಂತ್ರಜ್ಞಾನದ ಹೊರತಾಗಿಯೂ ಅಂಪಾಯರ್ಗಳು ಈ ಬಾರಿಯ ಐಪಿಎಲ್ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅದರಲ್ಲೂ ಅಂಪಾಯರ್ ನಿತಿನ್ ಮೆನನ್ ನೀಡಿದ ಶಾರ್ಟ್ ರನ್ ತೀರ್ಮಾನ ಡೆಲ್ಲಿ ವಿರುದ್ಧ ಪಂಜಾಬ್ ಸೋಲಲು ಕಾರಣವಾಗಿದ್ದು ಮಾತ್ರವಲ್ಲದೆ ಟೂರ್ನಿಯಿಂದಲೇ ಹೊರಬೀಳುವಂತೆ ಮಾಡಿತ್ತು. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬಿಸಿಸಿಐ ಚಿತ್ತ ಹರಿಸಲಿದೆ.
ಪ್ರೇಕ್ಷಕರ ಗೈರು
ಯುಎಇನಲ್ಲಿ ನಡೆದ ಐಪಿಎಲ್ 2020 ಆವೃತ್ತಿ ಎಲ್ಲಾ ರೋಚಕ, ರೋಮಾಂಚನಕಾರಿ ಕ್ಷಣಗಳನ್ನು ನೀಡಿತ್ತು, ಆದರೆ ಮೈದಾನದಲ್ಲಿ ಪ್ರೇಕ್ಷಕರ ಕರತಾಡನ ಮಾತ್ರ ಇರಲಿಲ್ಲ. ಆದರೆ ಮುಮದಿನ ಬಾರಿಯ ಐಪಿಎಲ್ಅನ್ನು ಭಾರತದಲ್ಲೇ ಆಯೋಜಿಸುವ ಚಿಂತನೆ ಬಿಸಿಸಿಐ ನಡೆಸಿದ್ದು ನಿಯಮವನ್ನು ಮೀರದಂತೆ ಪ್ರೇಕ್ಷಕರಿಗೂ ಅವಕಾಶ ನೀಡುವ ಯೋಜನೆ ಬಿಸಿಸಿಐ ಮುಂದಿದೆ.
ಮೊದಲಾರ್ಧದಲ್ಲಿ ಬೆಂಚ್ ಕಾದ ಗೇಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅನುಭವಿ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಮೊದಲಾರ್ದದ ಎಲ್ಲಾ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪಂಜಾಬ್ ಕೂಡ ಆಡಿದ ಬಹುತೇಕ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ ಗೇಲ್ ತಂಡಕ್ಕೆ ಮರಳುತ್ತಿದ್ದಂತೆಯೇ ಪಂಜಾಬ್ ಕೂಡ ಸತತ ಗೆಲುವುಗಳನ್ನು ಕಾಣಲು ಆರಂಭಿಸಿತ್ತು. ಗೇಲ್ ಕೂಡ ಅದ್ಭುತವಾದ ಪ್ರದರ್ಶನ ನೀಡಿ 7 ಪಂದ್ಯಗಳಲ್ಲಿ 3 ಅರ್ಧ ಶತಕವನ್ನು ಬಾರಿಸಿದ್ದರು. ಕ್ರಿಸ್ ಗೇಲ್ ಅವರಂತಾ ಆಟಗಾರನನ್ನು ಬೆಂಚ್ ಕಾಯುವಂತೆ ಮಾಡಿ ಕೈಸುಟ್ಟುಕೊಂಡ ಪಂಜಾಬ್ ಮುಂದಿನ ಆವರತ್ತಿಯಲ್ಲಿ ಈ ತಪ್ಪನ್ನು ಪುನರಾವರ್ತಿಸಲಾರದು.
ದೊಡ್ಡ ಹೆಸರುಗಳ ವೈಫಲ್ಯ
ಈ ಬಾರಿಯ ಆವೃತ್ತಿಯಲ್ಲಿ ದೊಡ್ಡ ಮೊತ್ತಕ್ಕೆ ಹರಾಜಾಗಿ ಕುತೂಹಲ ಸೃಷ್ಠಿಸಿದ್ದ ಹಲವು ಆಟಗಾರರು ನಿರಾಸೆ ಮೂಡಿಸಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್, ಕೇದಾರ್ ಜಾಧವ್, ಶೆಲ್ಡನ್ ಕಾಟ್ರೆಲ್, ದೊಡ್ಡ ವೈಫಲ್ಯವನ್ನು ಕಂಡಿದ್ದಾರೆ. ಆದರೆ ಖ್ಯಾತರಲ್ಲದ ಕಡಿಮೆ ಮೊತ್ತಕ್ಕೆ ಹರಾಜಾದ ಆಟಗಾರರು ದೊಡ್ಡ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಫ್ರಾಂಚೈಸಿಗಳು ಬುದ್ದಿವಂತಿಕೆಯಿಂದ ತಮ್ಮ ಮೊತ್ತವನ್ನು ಹೂಡಲಿದೆ