ಕೆಕೆಆರ್ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ವಿರಾಟ್ ಕೊಹ್ಲಿ
ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಭಾಗದ ರೀತಿಯೇ ದ್ವಿತೀಯ ಭಾಗದಲ್ಲಿಯೂ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಕಾಯುತ್ತಿದ್ದವರಿಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಹೀನಾಯ ಸೋಲನ್ನು ಕಾಣುವ ಮೂಲಕ ನಿರಾಸೆ ಮೂಡಿಸಿದೆ. ಹೀಗೆ ಕೊಲ್ಕತ್ತಾ ವಿರುದ್ಧ ಬೆಂಗಳೂರು ತಂಡ ಹೀನಾಯವಾಗಿ ಸೋತ ನಂತರ ಮಾತನಾಡಿರುವ ವಿರಾಟ್ ಕೊಹ್ಲಿ ಬೆಂಗಳೂರು ತಂಡದ ಬ್ಯಾಟಿಂಗ್ ವೈಫಲ್ಯತೆಗೆ ಇಬ್ಬನಿ ಕಾರಣವಾಯಿತು ಎಂದಿದ್ದಾರೆ. ಪಂದ್ಯದ ಆರಂಭದ ವೇಳೆಯೇ ಇಷ್ಟೊಂದು ದೊಡ್ಡ ಮಟ್ಟದ ಇಬ್ಬನಿ ಇರುತ್ತದೆ ಎಂದು ನಾವು ಊಹಿಸಿರಲಿಲ್ಲ, 42 ರನ್ಗಳಿಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ತಂಡ ಮುಂದಿನ 20 ರನ್ಗಳಲ್ಲಿ 5 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಇಂತಹ ಸನ್ನಿವೇಶದಲ್ಲಿ ಪುಟಿದೇಳುವುದು ತುಂಬಾ ಕಷ್ಟವಾಯಿತು ಎಂದು ವಿರಾಟ್ ಕೊಹ್ಲಿ ಸೋಲಿಗೆ ಕಾರಣವೇನೆಂಬುದನ್ನು ತಿಳಿಸಿದ್ದಾರೆ.
ತಂಡದ ಕೆಲ ಆಟಗಾರರು ಇತ್ತೀಚೆಗೆ ಟಿಟ್ವೆಂಟಿ ಆಡಿರಲಿಲ್ಲ
ಇನ್ನೂ ಮುಂದುವರಿದು ಬ್ಯಾಟಿಂಗ್ ವಿಫಲತೆಯ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ತಮ್ಮ ತಂಡದ ಹಲವಾರು ಆಟಗಾರರು ಇತ್ತೀಚಿನ ದಿನಗಳಲ್ಲಿ ಟಿ ಟ್ವೆಂಟಿ ಪಂದ್ಯಗಳನ್ನು ಆಡಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ತಂಡದ ಕೆಲ ಆಟಗಾರರು ಟಿ ಟ್ವೆಂಟಿ ಪಂದ್ಯಗಳನ್ನು ಆಡದೇ ಇರುವ ಕಾರಣ ಈ ಪಂದ್ಯದಲ್ಲಿ ಎಡವಿದರು ಎಂಬರ್ಥದಲ್ಲಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಇಂತಹ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ ಪಿಚ್ಗೆ ಹೊಂದಿಕೊಳ್ಳಬೇಕಾದರೆ ಕನಿಷ್ಠ 8 ಎಸೆತಗಳನ್ನಾದರೂ ಎದುರಿಸಬೇಕು ಇಲ್ಲವಾದರೆ ಈ ರೀತಿ ಎದುರಾಳಿ ತಂಡ ನಮ್ಮ ಮೇಲೆ ಹಿಡಿತ ಸಾಧಿಸುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.ಹೀಗೆ ಬೆಂಗಳೂರು ತಂಡದ ಕೆಲ ಆಟಗಾರರು ಇತ್ತೀಚಿನ ದಿನಗಳಲ್ಲಿ ಟಿ ಟ್ವೆಂಟಿ ಪಂದ್ಯಗಳನ್ನು ಆಡದೇ ಇರುವುದು ಸೋಲಿಗೆ ಮತ್ತೊಂದು ಪ್ರಮುಖ ಕಾರಣವಾಯಿತು ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಭರವಸೆ ನೀಡಿದ ಕೊಹ್ಲಿ
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ತಂಡದ ತಪ್ಪುಗಳನ್ನು ತಿದ್ದುಕೊಂಡು ಉತ್ತಮ ಪ್ರದರ್ಶನ ನೀಡಲಿದೆ ಎಂಬ ಭರವಸೆಯನ್ನು ತಂಡದ ನಾಯಕ ವಿರಾಟ್ ಕೊಹ್ಲಿ ನೀಡಿದರು.