ಕೆಎಲ್ ರಾಹುಲ್ ಬ್ಯಾಟಿಂಗ್ ಕುರಿತು ಕಿಡಿಕಾರಿದ ವಿರೇಂದ್ರ ಸೆಹ್ವಾಗ್
'ಕೆಎಲ್ ರಾಹುಲ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಪರಿಪೂರ್ಣ ಬ್ಯಾಟಿಂಗ್ ನಡೆಸಿದರು ಎಂದೆನಿಸುತ್ತಿಲ್ಲ. 42 ಎಸೆತಗಳಿಗೆ 46 ರನ್ ಬೇಕಾಗಿದ್ದಂತಹ ಪಂದ್ಯದಲ್ಲಿ ಕೊನೆಯವರೆಗೂ ಕಣದಲ್ಲಿದ್ದು ವಿನ್ನಿಂಗ್ ಶಾಟ್ ಬಾರಿಸಿದ್ದರೆ ಕೆಎಲ್ ರಾಹುಲ್ ಬ್ಯಾಟಿಂಗ್ ಪರಿಪೂರ್ಣವಾದದ್ದು ಎಂದು ಒಪ್ಪುತ್ತಿದ್ದೆ' ಎಂದು ಹೇಳಿಕೆ ನೀಡುವುದರ ಮೂಲಕ ಕೆಎಲ್ ರಾಹುಲ್ ಬ್ಯಾಟಿಂಗ್ ಕುರಿತು ವಿರೇಂದ್ರ ಸೆಹ್ವಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾರುಖ್ ಖಾನ್ ಕೂಡ ಔಟ್ ಆಗಿದ್ದರೆ ಪಂದ್ಯದ ಗತಿ ಏನು?
'ಕೆಎಲ್ ರಾಹುಲ್ ಔಟ್ ಆಗುತ್ತಾ ಇದ್ದಂತೆ ಪಂಜಾಬ್ ಕಿಂಗ್ಸ್ ತಂಡದ ಮತ್ತೋರ್ವ ಆಟಗಾರನಾದ ಶಾರುಖ್ ಖಾನ್ ಕೂಡ ಔಟ್ ಆಗಿ, ಪಂಜಾಬ್ ಕಿಂಗ್ಸ್ ತಂಡ ಪಂದ್ಯವನ್ನು ಸೋತಿದ್ದರೆ ಆ ಸೋಲಿಗೆ ಯಾರು ಹೊಣೆಯಾಗುತ್ತಿದ್ದರು? ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೊನೆಯ ಓವರ್ ತನಕ ಎಳೆದುಕೊಂಡು ಹೋದ ಕೆಎಲ್ ರಾಹುಲ್ ಸೋಲಿಗೆ ಹೊಣೆ ಎಂದು ನಾವೆಲ್ಲರೂ ಆರೋಪ ಹೊರಿಸುತ್ತಿದ್ದೆವಷ್ಟೇ. ಉತ್ತಮ ರನ್ ಕಲೆ ಹಾಕಿದರೂ ತನ್ನ ತಂಡಕ್ಕೆ ಗೆಲುವನ್ನು ತಂದು ಕೊಡುವ ಮುನ್ನವೇ ವಿಕೆಟ್ ಒಪ್ಪಿಸಿ ಕೆಎಲ್ ರಾಹುಲ್ ಪೆವಿಲಿಯನ್ ಸೇರಿಕೊಂಡರು. ಓರ್ವ ನಾಯಕ ಇಂತಹ ಅನಿವಾರ್ಯ ಪಂದ್ಯಗಳಲ್ಲಿ ಕೇವಲ ರನ್ ಗಳಿಸಿದರೆ ಸಾಕಾಗುವುದಿಲ್ಲ ಬದಲಾಗಿ ಪಂದ್ಯವನ್ನು ಗೆಲ್ಲಿಸುವವರೆಗೂ ಕಣದಲ್ಲಿದ್ದು ಹೋರಾಟ ನಡೆಸಬೇಕು' ಎಂದು ವಿರೇಂದ್ರ ಸೆಹ್ವಾಗ್ ಹೇಳಿಕೆ ನೀಡಿದ್ದಾರೆ.
ಪಂದ್ಯಶ್ರೇಷ್ಠ ಕೆಎಲ್ ರಾಹುಲ್ ಆದರೂ ಹೀರೋ ಆಗಿ ಹೊರಹೊಮ್ಮಿದ್ದು ಶಾರುಖ್ ಖಾನ್!
ಹೌದು, ಕೆಎಲ್ ರಾಹುಲ್ ಉತ್ತಮ ಆರಂಭ ನೀಡುವುದರ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೂ ಸಹ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಪಂದ್ಯದಲ್ಲಿ ಹೀರೋ ಎನಿಸಿಕೊಂಡದ್ದು ಶಾರುಖ್ ಖಾನ್. 9 ಎಸೆತಗಳನ್ನು ಎದುರಿಸಿದ ಶಾರುಖ್ ಖಾನ್ಅಜೇಯ 22 ರನ್ ಬಾರಿಸುವುದರ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮ ಓವರ್ನಲ್ಲಿ ರಾಹುಲ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡ ನಂತರ 4 ಎಸೆತಗಳಿಗೆ 4 ರನ್ ಅಗತ್ಯವಿದ್ದಾಗ ಸಿಕ್ಸರ್ ಬಾರಿಸಿದ ಶಾರುಖ್ ಖಾನ್ ಪಂದ್ಯವನ್ನು ಗೆಲ್ಲಿಸಿ ಪಂಜಾಬ್ ಕಿಂಗ್ಸ್ ತಂಡದ ಪರ ಹೀರೋ ಆಗಿ ನಿಂತರು.