ಭಾನುವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದ್ದು ಬಳಿಕ ಸೂಪರ್ ಓವರ್ನಲ್ಲಿ ಅಂತಿಮ ಎಸೆತದಲ್ಲಿ ಡೆಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಈ ಸೋಲಿಗೆ ಸನ್ರೈಶರ್ಸ್ ಮಾಡಿದ ಒಂದು ನಿರ್ಧಾರ ಕಾರಣ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕುಟುಕಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ನಲ್ಲಿ ಜಾನಿ ಬೈರ್ಸ್ಟೋವ್ ಅವರನ್ನು ಕಣಕ್ಕಿಳಿಸದ ಬಗ್ಗೆ ವಿರೇಂದ್ರ ಸೆಗ್ವಾಗ್ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. 18 ಎಸೆತಗಳಲ್ಲಿ 38 ರನ್ಗಳಿಸಿದ್ದರೂ ಜಾನಿ ಬೈರಸ್ಸ್ಟೋವ್ ಅವರನ್ನು ಬ್ಯಾಟಿಂಗ್ಗೆ ಇಳಿಸದಿರುವುದು ಹೈದರಾಬಾದ್ ಮಾಡಿಕೊಂಡ ಸ್ವಯಂಕೃತ ಅಪರಾಧ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್ನಲ್ಲಿ ಗೆದ್ದ ಡೆಲ್ಲಿ
ಸೂಪರ್ ಓವರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ನಾಯಕ ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ಗೆ ಇಳಿದಿದ್ದರು. ಅಕ್ಷರ್ ಪಟೇಲ್ ಎಸೆದ ಸೂಪರ್ ಓವರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 8 ರನ್ಗಳಿಸಲಷ್ಟೇ ಶಕ್ತವಾಯಿತು. ಆದರೆ ವಾರ್ನರ್ ಒಂದು ಶಾರ್ಟ್ ರನ್ ಓಡಿದ್ದರು ಎಂಬ ಕಾರಣಕ್ಕೆ ಒಂದು ರನ್ ಕಡಿತಗೊಳಿಸಲಾಯಿತು. ಇದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.
ಸನ್ರೈಸರ್ಸ್ ಹೈದರಾಬಾದ್ ತಂಡದ ಈ ನಿರ್ಧಾರವನ್ನು ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಟೀಕಿಸಿದ್ದಾರೆ. "ಬೈರ್ಸ್ಟೋವ್ ಟಾಯ್ಲೆಟ್ನಲ್ಲಿ ಇರುವುದನ್ನು ಹೊರತುಪಡಿಸಿದರೆ ಸೂಪರ್ ಓವರ್ನಲ್ಲಿ ಅವರನ್ನು ಕಣಕ್ಕಿಳಿಸಲು ಮೊದಲ ಕಾರಣ ನನಗೆ ತೋಚುತ್ತಿಲ್ಲ. 18 ಎಸೆತಗಳಲ್ಲಿ ಆತ 38 ರನ್ಗಳಿಸಿ ಉತ್ತಮ ಲಯದಲ್ಲಿರುವುದು ಸ್ಪಷ್ಟವಾಗಿತ್ತು. ಹೈದರಾಬಾದ್ ಅದ್ಭುತವಾಗಿ ಹೋರಾಡಿತು. ಆದರೆ ಆದರೆ ಈ ವಿಚಿತ್ರ ನಿರ್ಧಾರಕ್ಕೆ ತಮ್ಮನ್ನು ತಾವೇ ನಿಂದಿಸಿಕೊಳ್ಳಬೇಕು" ಎಂದು ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.