ಭಾವನಾತ್ಮಕ ಟ್ವೀಟ್ ಮಾಡಿದ ಹಸರಂಗ
ಐಪಿಎಲ್ನಲ್ಲಿ ಆರ್ಸಿಬಿ ಪರವಾಗಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ವನಿಂದು ಹಸರಂಗ ಆರ್ಸಿಬಿ ಬಯೋಬಬಲ್ ಬಿಟ್ಟು ಹೊರನಡೆಯುತ್ತಿರುವ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಆರ್ಸಿಬಿ ಜೊತೆಗಿನ ಬಾಂಧವ್ಯವನ್ನು ಭಾವುಕವಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಆರ್ಸಿಬಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾನು ಆರ್ಸಿಬಿ ಕುಟುಂಬಕ್ಕೆ ಸಹ ಆಟಗಾರರಿಗೆ ಹೃದಯಾಂತರಾಳದಿಂದ ಧನ್ಯವಾದವನ್ನು ಸಲ್ಲಿಸುತ್ತೇನೆ. ಜೊತೆಗೆ ಪ್ಲೇ ಆಫ್ ಹಂತಕ್ಕೆ ತಂಡದ ಸದಸ್ಯರಿಗೆ ಶುಭ ಹಾರೈಸುತ್ತೇನೆ. ಈ ವರ್ಷ ನಾವು ಬಹುಶಃ ಪ್ರಶಸ್ತಿಯನ್ನು ಗೆಲ್ಲಲಿದ್ದೇವೆ. ತಂಡದ ಮ್ಯಾನೇಜ್ಮೆಂಟ್ನಿಂದ ಹಿಡುದು ಎಲಲ್ಆ ವಿಚಾರಗಳಲ್ಲಿಯೂ ಅನುಭವ ತುಂಬಾ ಅದ್ಭುತವಾಗಿದೆ. ಆಟಗಾರರ ಮಧ್ಯೆ ತುಂಬಾ ಬಲಿಷ್ಠವಾದ ಭ್ರಾತೃತ್ವ ಹಾಗೂ ಗೆಳೆತನ ಬೆಳೆದಿದೆ. ಈ ಅವಕಾಶಕ್ಕೆ ನಾನು ನಿಜವಾಗಿಯೂ ಸಂತಸಗೊಂಡಿದ್ದೇನೆ" ಎಂದು ಹಸರಂಗ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಮಿಂಚಲು ವಿಫಲವಾದ ಲಂಕಾ ಆಟಗಾರ
ಈ ಬಾರಿಯ ಐಪಿಎಲ್ನ ಯುಎಇ ಆವೃತ್ತಿಗೆ ಮುನ್ನ ಆರ್ಸಿಬಿ ಶ್ರೀಲಂಕಾ ಆಟಗಾರರಾದ ವನಿಂದು ಹಸರಂಗ ಹಾಗೂ ದುಷ್ಮಂತ ಚಮೀರಾ ಆವರನ್ನು ಸೇರ್ಪಡೆಗೊಳಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಪಿನ್ನರ್ ಆಗಿ ಅದ್ಭುತ ಫಾರ್ಮ್ನಲ್ಲಿದ್ದು ಮಿಂಚಿರುವ ಹಸರಂಗ ಐಪಿಎಲ್ನಲ್ಲಿ ವಿಫಲವಾಗಿದ್ದಾರೆ. ಆರ್ಸಿಬಿ ಪರವಾಗಿ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಗಳಿಸಿರುವ ಹಸರಂಗ ಒಂದು ವಿಕೆಟ್ ಪಡೆಯುವಲ್ಲಿಯೂ ಸಫಲವಾಗಿಲ್ಲ. ಇನ್ನು ಬ್ಯಾಟ್ನಲ್ಲಿ ಹಸರಂಗ ಗಳಿಸಿದ್ದು ಕೇವಲ ಒಂದು ರನ್ ಮಾತ್ರ.
ಆಡುವ ಅವಕಾಶವನ್ನೇ ಗಳಿಸದ ಚಮೀರಾ
ಮತ್ತೊಂದೆಡೆ ದುಷ್ಮಂತ ಚಮೀರಾ ಕೂಡ ಈ ಬಾರಿಯ ಐಪಿಎಲ್ಗೆ ಆರ್ಸಿಬಿ ಪರವಾಗಿ ಮೊದಲ ಬಾರಿಗೆ ಪಾಲ್ಗೊಳ್ಳುವ ಅವಕಾಶ ಗಳಿಸಿಕೊಂಡಿದ್ದರು. ಆದರೆ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಚಮೀರಾ ವಿಫಲವಾಗಿದ್ದಾರೆ. ಆರ್ಸಿಬಿ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಬಯಸದ ಹಿನ್ನೆಲೆಯಲ್ಲಿ ಚಮೀರಾ ಲೀಗ್ ಹಂತದಲ್ಲಿ ಸಂಪೂರ್ಣವಾಗಿ ಬೆಂಚ್ ಕಾಯುವಂತಾಯ್ತು.
ಗ್ರೂಪ್ ಹಂತದಲ್ಲಿ ಪಾಲ್ಗೊಳ್ಳಬೇಕಿದೆ ಶ್ರೀಲಂಕಾ
ಈ ಬಾರಿಯ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಗ್ರೂಫ್ ಹಂತದಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಯಾನ ಮುಂದಿನ ಸೋಮವಾರದಿಂದಲೇ ಆರಂಭವಾಗಲಿದೆ. ಗ್ರೂಫ್ ಹಂತದಲ್ಲಿ ದುರ್ಬಲ ತಂಡಗಳ ವಿರುದ್ಧ ಸೆಣೆಸಿ ಗೆದ್ದ ಬಳಿಕ ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲು ಸಾಧ್ಯವಿದೆ. ಬಾಂಗ್ಲಾದೇಶ ಕೂಡ ಈ ಗ್ರೂಫ್ ಹಂತದಲ್ಲಿ ಆಡಿದ ಬಳಿಕ ಅರ್ಹತೆ ಸಂಪಾದಿಸಬೇಕಿರುವ ಮತ್ತೊಂದು ಟೆಸ್ಟ್ ಮಾನ್ಯತೆ ಪಡೆದ ದೇಶವಾಗಿದೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರ ಬಳಿಕ ಆರಂಭವಾಗಲಿದೆ.