ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಟೈ ಮಾಡಿಕೊಂಡಿತು. ಆದರೆ ಸೂಪರ್ ಓವರ್ನಲ್ಲಿ ವಾರ್ನರ್ ಬಳಗ ವಿಫಲವಾಗಿ ಎರಡು ಅಂಕವನ್ನು ಬಿಟ್ಟುಕೊಟ್ಟಿದೆ. ಈ ಸೋಲಿನ ಬಳಿಕ ಮಾತನಾಡಿದ ಡೇವಿಡ್ ವಾರ್ನರ್ ಮನೀಶ್ ಪಾಂಡೆಯನ್ನು ತಂಡದಿಂದ ಕೈಬಿಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮನೀಶ್ ಪಾಂಡೆಯನ್ನು ತಂಡದಿಂದ ಹೊರಗಿಡುವ ಆಯ್ಕೆಗಾರರ ನಿರ್ಧಾರ ಕಠಿಣವಾದದ್ದು ಎಂದು ಡೇವಿಡ್ ವಾರ್ನರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾರ ಹೆಸರನ್ನು ತೆಗೆದುಕೊಳ್ಳದೆ ಈ ಪ್ರತಿಕ್ರಿಯೆ ನೀಡಿದ್ದಾರೆ ಸನ್ರೈಸರ್ಸ್ ಹೈದರಾಬಾದ್ ನಾಯಕ.
ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್ನಲ್ಲಿ ಗೆದ್ದ ಡೆಲ್ಲಿ
ಅನುಭವಿ ಮನೀಶ್ ಪಾಂಡೆ ಈ ಬಾರಿಯ ಐಪಿಎಲ್ನಲ್ಲಿ ವೇಗವಾಗಿ ರನ್ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಡುವ ಬಳಗದಿಂದ ಕೈಬಿಡಲಾಯಿತು. ಅವರ ಸ್ಥಾನಕ್ಕೆ ಝಾರ್ಖಂಡ್ನ ಯುವ ಎಡಗೈ ಆಟಗಾರ ವಿರಾಟ್ ಸಿಂಗ್ ಆವರನ್ನು ಆಡಿಸಲಾಯಿತು. ಆದರೆ ವಿರಾಟ್ ಸಿಂಗ್ ಎದುರಿಸಿದ 14 ಎಸೆತಗಳಲ್ಲಿ ಕೇವಲ 4 ರನ್ ಮಾತ್ರವೇ ಗಳಿಸಿದ್ದಾರೆ.
"ಈ ಬದಲಾವಣೆ ಆಯ್ಕೆಗಾರರ ನಿರ್ಧಾರವಾಗಿದೆ. ನನ್ನ ಅಭಿಪ್ರಾಯದ ಪ್ರಕಾರ ಇದು ಕಠಿಣವಾದ ನಿರ್ಧಾರವಾಗಿದೆ" ಎಂದು ವಾರ್ನರ್ ಹೇಳಿದ್ದಾರೆ. ಈ ಮೂಲಕ ಎಸ್ಆರ್ಹೆಚ್ ಕೋಚ್ ಟ್ರೇವರ್ ಬೇಲಿಸ್ ಹಾಗೂ ಮೆಂಟರ್ ವಿವಿಎಸ್ ಲಕ್ಷ್ಮಣ್ ಹೆಸರನ್ನು ತೆಗೆದುಕೊಳ್ಳದೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
" ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗಂದ ಮಾತ್ರಕ್ಕೆ ವಿರಾಟ್ ಸಿಂಗ್ ಅವರನ್ನು ದೂಷಿಸಲು ಸಾಧ್ಯವಿಲ್ಲ. ಆತನೋರ್ವ ಅತ್ಯುತ್ತಮ ಆಟಗಾರ, ಆದರೆ ಇಲ್ಲಿನ ಪಿಚ್ ಬಹಳ ಕಠಿಣವಾಗಿತ್ತು. ಅವರು ಮಧ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ನಡೆಸಿದರು. ಇದು ನಮಗೆ ಸವಾಲಾಯಿತು" ಎಂದು ವಾರ್ನರ್ ಹೇಳಿದ್ದಾರೆ