ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇ 4ರವರೆಗೂ ಯಾವುದೇ ರೀತಿಯ ಅಡಚಣೆಗಳಿಲ್ಲದೆ ಯಶಸ್ವಿಯಾಗಿ ನಡೆದಿತ್ತು. ಆದರೆ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೇ 4ರ ನಂತರದ ಐಪಿಎಲ್ ಪಂದ್ಯಗಳನ್ನು ಬಿಸಿಸಿಐ ಮುಂದೂಡಿದೆ. ಇಲ್ಲಿಯವರೆಗೂ 29 ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಬಿಸಿಸಿಐ ಚಿಂತನೆಯನ್ನು ನಡೆಸುತ್ತಿದೆ.
ಐಪಿಎಲ್ 2021 : ಅತಿಹೆಚ್ಚು ರನ್ ನೀಡಿದ ಬೌಲರ್ಗಳ ಪಟ್ಟಿ
ಟೂರ್ನಿ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ತಂಡದ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಮತ್ತು ಸಿಬ್ಬಂದಿ ವರ್ಗ ತಮ್ಮ ತವರುಗಳಿಗೆ ತೆರಳುವ ಮುನ್ನ ತಾವು ತಂಗಿದ್ದ ಹೋಟೆಲ್ನಲ್ಲಿ ಪುಟ್ಟ ಸಭೆಯೊಂದನ್ನು ನಡೆಸಿತ್ತು. ಈ ವೇಳೆ ಮೊದಲು ವಿದೇಶಿ ಆಟಗಾರರು ಹೋಟೆಲ್ನಿಂದ ತೆರಳಲಿ, ತದನಂತರ ದೇಶೀಯ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಹೋಟೆಲ್ನಿಂದ ಹೊರಡಲಿ, ಹೀಗೆ ತಂಡದ ಎಲ್ಲ ಸದಸ್ಯರು ಸುರಕ್ಷಿತವಾಗಿ ಹೋಟೆಲ್ನಿಂದ ಹೊರಟ ಮೇಲೆ ಕೊನೆಯಲ್ಲಿ ತಾನು ಹೊರಡುವುದಾಗಿ ಮಹೇಂದ್ರ ಸಿಂಗ್ ಧೋನಿ ಸಭೆಯಲ್ಲಿ ನಿರ್ಧಾರವನ್ನು ಕೈಗೊಂಡಿದ್ದರು.
ಮಹೇಂದ್ರ ಸಿಂಗ್ ಧೋನಿ ಕೈಗೊಂಡಿದ್ದ ಈ ನಿರ್ಧಾರವನ್ನು ಚೆನ್ನೈ ತಂಡದ ಸದಸ್ಯರೊಬ್ಬರು ಹಂಚಿಕೊಂಡಿದ್ದರು. ಈ ವಿಷಯವನ್ನು ತಿಳಿದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಇದೀಗ ಧೋನಿ ಅವರ ನಡೆಯನ್ನು ಪ್ರಶಂಸಿಸಿದ್ದಾರೆ. ಅಂದುಕೊಂಡ ಕೆಲಸವನ್ನು ಕೊನೆಯವರೆಗೂ ಇದ್ದು ಯಶಸ್ವಿಯಾಗಿ ಮಾಡಿ ಮುಗಿಸುವುದು ಎಂಎಸ್ ಧೋನಿಯವರ ಗುಣ, ತನ್ನ ತಂಡದ ಆಟಗಾರರ ಸುರಕ್ಷತೆಯನ್ನು ನೋಡಿಕೊಳ್ಳುವವನೇ ನಿಜವಾದ ನಾಯಕ, ಇಂತಹ ಉತ್ತಮ ಕೆಲಸ ಮಾಡಲು ಎಂಎಸ್ ಧೋನಿಯಿಂದ ಮಾತ್ರ ಸಾಧ್ಯ ಎಂದು ವಾಸಿಂ ಜಾಫರ್ ಮಹೇಂದ್ರ ಸಿಂಗ್ ಧೋನಿ ತೆಗೆದುಕೊಂಡ ನಿರ್ಧಾರವನ್ನು ಕೊಂಡಾಡಿದ್ದಾರೆ.