ಸಾಕಷ್ಟು ಕಠಿಣ ಕ್ರಮಗಳೊಂದಿಗೆ ಬಯೋಬಬಲ್ ನಿರ್ಮಿಸಿಯೂ ಐಪಿಎಲ್ 14ನೇ ಆವೃತ್ತಿಗೆ ಕೊರೊನಾ ವೈರಸ್ ಆಘಾತವನ್ನು ನೀಡಿದೆ. ಬಯೋಬಬಲ್ನ ಒಳಗೆಯೇ ಇದ್ದ ನಾಲ್ವರು ಆಟಗಾರರು ಕೊರೊನಾ ವೈರಸ್ಗೆ ತುತ್ತಾಗಿ ಇಡೀ ಟೂರ್ನಿ ಮುಂದೂಡಿಕೆಗೆ ಕಾರಣವಾಗಿದೆ.
ವರುಣ್ ಚಕ್ರವರ್ತಿ, ಸಂದೀಪ್ ವಾಯರ್, ಅಮಿತ್ ಮಿಶ್ರಾ ಹಾಗೂ ವೃದ್ಧಿಮಾನ್ ಸಾಹ ಕೊರೊನಾ ವೈರಸ್ಗೆ ತುತ್ತಾದ ನಾಲ್ವರು ಆಟಗಾರರು. ಈ ಬಗ್ಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯಿಸಿದ್ದು ವೃದ್ಧಿಮಾನ್ ಸಾಹಾ ಕೊರೊನಾ ವೈರಸ್ಗೆ ಯಾವ ರೀತಿಯಲ್ಲಿ ತುತ್ತಾದರು ಎಂಬುದು ನಮಗೆಲ್ಲಾ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ.
ಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು
"ವೃದ್ಧಿಮಾನ್ ಸಾಹಾ ಸಂಪೂರ್ಣವಾಗಿ ಹಾಗೂ ವೇಗವಾಗಿ ಗುಣಮುಖರಾಗಲು ನಾನು ಹಾರೈಸುತ್ತೇನೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಾಹ ಭಾನುವಾರ ಆಡಬೇಕಾಗಿತ್ತು. ಆದರೆ ಶನಿವಾರ ರಾತ್ರಿ ಅನಾರೋಗ್ಯಕ್ಕೆ ತುತ್ತಾದ ಕಾರಣದಿಂದಾಗಿ ಅವರನ್ನು ತಕ್ಷಣವೇ ಪ್ರತ್ಯೇಕಿಸಲಾಯಿತು"
"ಇದಾದ ನಂತರ ನಡೆಸಿದ ಪರೀಕ್ಷೆಯಲ್ಲಿ ಅವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಆಟಗಾರರು ಕೂಡ ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಆದರೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡ ನಂತರವೂ ವೃದ್ಧಿಮಾನ್ ಸಾಹ ಅವರಿಗೆ ವೈರಸ್ ಹೇಗೆ ತಗುಲಿತು ಎಂಬುದು ನಮ್ಮೆಲ್ಲರಿಗೂ ಅಚ್ಚರಿ ಮೂಡಿಸಿದೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.