ಈ ಬಾರಿ ಅತ್ಯುತ್ತಮ ಆರಂಭವನ್ನು ಮಾಡಿದ್ದೇವೆ, ಕಪ್ ಗೆಲ್ಲುತ್ತೇವೆ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭವನ್ನು ಪಡೆದುಕೊಂಡಿದೆ ಎಂದು ಯುಜುವೇಂದ್ರ ಚಹಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ನೆಲದಲ್ಲಿ ನಡೆದ ತನ್ನ ಮೊದಲ 7 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ಪಂದ್ಯಗಳಲ್ಲಿ ಜಯ ಗಳಿಸುವುದರ ಮೂಲಕ ಉತ್ತಮವಾದ ಆರಂಭವನ್ನು ಪಡೆದುಕೊಂಡಿದ್ದು, ನಮ್ಮ ತಂಡ ಕಪ್ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಯುಜ್ವೇಂದ್ರ ಚಹಲ್ ವಿಶ್ವಾಸ ವ್ಯಕ್ತಪಡಿಸಿದರು.
ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲಲಿದ್ದೇವೆ
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗ ಆರಂಭವಾಗುವ ಮುನ್ನವೇ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ ವಿರಾಟ್ ಕೊಹ್ಲಿ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ಈ ಟೂರ್ನಿಯ ಬಳಿಕ ಬಿಟ್ಟುಕೊಡುವುದಾಗಿ ಹೇಳಿಕೆಯನ್ನು ನೀಡಿದ್ದರು. ಹೀಗಾಗಿ ಪ್ರಸ್ತುತ ಐಪಿಎಲ್ ಟೂರ್ನಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬೆಂಗಳೂರು ತಂಡ ಆಡಲಿರುವ ಕೊನೆಯ ಐಪಿಎಲ್ ಟೂರ್ನಿಯಾಗಲಿದೆ. ಈ ಕುರಿತು ಮಾತನಾಡಿದ ಯುಜ್ವೇಂದ್ರ ಚಹಲ್ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ತವರಿಗೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂಎಸ್ ಧೋನಿಯಿಂದ ಟಿಪ್ಸ್ ಪಡೆದುಕೊಂಡಿದ್ದೇನೆ ಎಂದ ಚಹಾಲ್
ಇನ್ನು ಮುಂದುವರಿಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಭಾಗವಹಿಸಲು ದುಬೈ ತಲುಪಿರುವ ಯುಜ್ವೇಂದ್ರ ಚಹಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರನ್ನು ಭೇಟಿಯಾಗಿದ್ದಾರೆ. ಹೀಗೆ ಭೇಟಿಯಾದ ತನ್ನನ್ನು ಎಂಎಸ್ ಧೋನಿ ಪ್ರೀತಿಯಿಂದ ಬರಮಾಡಿಕೊಂಡು ಅಪ್ಪುಗೆಯನ್ನು ನೀಡಿದರು ಎಂದು ಚಾಹಲ್ ಹೇಳಿಕೊಂಡಿದ್ದಾರೆ. ನಂತರ ಬೌಲಿಂಗ್ ಕುರಿತಾಗಿ ತನಗಿರುವ ಕೆಲವೊಂದಿಷ್ಟು ಸಂಶಯಗಳನ್ನು ಧೋನಿ ಬಳಿ ಚಹಲ್ ಚರ್ಚಿಸಿದ್ದು ಆ ಸಂಶಯ ಮತ್ತು ಗೊಂದಲಗಳಿಗೆ ಎಂಎಸ್ ಧೋನಿ ಕೆಲವೊಂದಿಷ್ಟು ಸಲಹೆಗಳನ್ನು ಕೂಡ ನೀಡಿದ್ದಾರೆ ಎಂದು ಯುಜ್ವೇಂದ್ರ ಚಹಲ್ ಹೇಳಿಕೊಂಡಿದ್ದಾರೆ.