ಗುರುವಾರ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತೊಂದು ನೀರಸ ಪ್ರದರ್ಶನ ನೀಡಿ ಸೋಲು ಕಂಡಿತು. ಈ ಮೂಲಕ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಈ ಸೋಲಿನ ಬಳಿಕ ನಾಯಕ ಇಯಾನ್ ಮಾರ್ಗನ್ ಮಾತನಾಡಿ ಸೋಲಿಗೆ ಕಾರಣವನ್ನು ಹೇಳಿದ್ದಾರೆ. ನಿಧಾನಗತಿಯ ಬ್ಯಾಟಿಂಗ್ನ ಕಾರಣದಿಂದಾಗಿ ಕೆಕೆಆರ್ ಸೋಲು ಕಂಡಿದೆ ಎಂದಿದ್ದಾರೆ.
ಅಹ್ಮದಾಬಾದ್ನ ನರೆಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ನೀಡಿದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರದ ಆರಂಭವನ್ನು ಪಡೆದುಕೊಂಡಿತು. ಶಿವಂ ಮಾವಿ ಎಸೆದ ಮೊದಲ ಓವರ್ನಲ್ಲಿಯೇ ಪೃಥ್ವಿ ಶಾ ಎಲ್ಲಾ ಆರು ಎಸೆತಗಳನ್ನು ಬೌಂಡರಿಗಟ್ಟಿ ದಾಖಲೆ ಬರೆದರು. ಇದರಿಂದಾಗಿ ಡೆಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿತ್ತು.
ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವು
"ಶಾ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಮಗೆ ಹೆಚ್ಚಿನದೇನೂ ಮಾಡುವ ಅವಕಾಶ ನೀಡಲಿಲ್ಲ. ಪಿಚ್ ಕೂಡ ಎಷ್ಟು ಚೆನ್ನಾಗಿದೆ ಎಂದು ಅವರು ತೋರಿಸಿಕೊಟ್ಟರು. ನಾವು ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದೆವು" ಎಂದಿದ್ದಾರೆ ಇಯಾನ್ ಮಾರ್ಗನ್.
"ಫಲಿತಾಂಶವನ್ನು ನಮ್ಮತ್ತ ತಿರುಗಿಸುವ ಅವಕಾಶ ನಮಗಿದೆ. ನಮ್ಮ ಬಳಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಪ್ರತಿಭೆ ಮಾತ್ರವೇ ನಿಮ್ಮನ್ನು ಮೇಲಕ್ಕೆತ್ತಲಾರದು. ಯೋಜನೆಗಳ ಅನುಷ್ಟಾನ ಮಾಡುವ ರೀತಿ ಬಹಳ ಮುಖ್ಯವಾಗುತ್ತದೆ" ಎಂದು ಇಂಗ್ಲೆಂಡ್ನ ವಿಶ್ವಕಪ್ ವಿಜೇತ ತಂಡದ ನಾಯಕ ಪ್ರತಿಕ್ರಿಯಿಸಿದ್ದಾರೆ.