ಆರ್ಸಿಬಿ ಬರೀ ತಂಡವಲ್ಲ ಅದೊಂದು ಎಮೋಷನ್ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇಷ್ಟಪಡುವ ಹಾಗೂ ಪ್ರೀತಿಸುವ ಅಭಿಮಾನಿಗಳು ಆರ್ಸಿಬಿ ತಂಡವನ್ನು ಕರ್ನಾಟಕದ ತಂಡ , ಕನ್ನಡಿಗರ ಟೀಮ್ ಎಂದು ಸಹ ಇಷ್ಟಪಡುತ್ತಾರೆ. ತಂಡದಲ್ಲಿ ಕನ್ನಡಿಗರು ಇರಲಿ ಬಿಡಲಿ ಬೆಂಗಳೂರು ಎಂಬ ಹೆಸರು ಸಾಕು ಆ ತಂಡಕ್ಕೆ ಬೆಂಬಲ ನೀಡಲು ಎಂದು ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಅಭಿಮಾನಿಗಳು ಕಾಮೆಂಟ್ ಹಾಕುವುದನ್ನು ನೀವು ಆಗಾಗ ನೋಡುತ್ತಲೇ ಇರುತ್ತೀರಾ.
ಕೇವಲ ಆರ್ಸಿಬಿ ಅಭಿಮಾನಿಗಳು ಮಾತ್ರವಲ್ಲದೆ ಆರ್ಸಿಬಿ ತಂಡದ ಆಟಗಾರರೂ ಸಹ ಬೆಂಗಳೂರು, ಕರ್ನಾಟಕ ಮತ್ತು ಕನ್ನಡ ಎಂದರೆ ವಿಶೇಷ ಗೌರವವನ್ನು ತೋರಿಸುತ್ತಾರೆ. ಈ ಹಿಂದೆ ಆರ್ಸಿಬಿ ತಂಡದ ಎಬಿ ಡಿವಿಲಿಯರ್ಸ್ ಅಣ್ಣಾವ್ರ ಹಾಡುಗಳು ಮತ್ತು ಅಂಬರೀಶ್ ಅವರ ಮಂಡ್ಯದ ಗಂಡು ಸಿನಿಮಾದ ಹಾಡುಗಳನ್ನು ಹಾಡಿ ಖುಷಿಪಟ್ಟಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿರಾಟ್ ಕೊಹ್ಲಿ ಈ ಸಲ ಕಪ್ ನಮ್ದೆ ಎಂದು ಕನ್ನಡದಲ್ಲಿ ಹೇಳಿದ್ದ ವಿಡಿಯೋ ತುಣುಕು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಯುಜ್ವೇಂದ್ರ ಚಹಾಲ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡುವ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.
ಯುಜುವೇಂದ್ರ ಚಾಹಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆರ್ಸಿಬಿ ತಂಡದ ಹಳೆಯ ಜೆರ್ಸಿಯಲ್ಲಿರುವ ಮತ್ತು ಪ್ರಸ್ತುತ ಜೆರ್ಸಿಯಲ್ಲಿರುವ ತಮ್ಮ ಕೆಲವೊಂದು ಫೋಟೋಗಳನ್ನು ಹಂಚಿಕೊಂಡು 'ಅಂದಿಗೂ, ಇಂದಿಗೂ, ಎಂದೆಂದಿಗೂ ಆರ್ಸಿಬಿ' ಎಂದು ಕನ್ನಡದಲ್ಲಿ ಬರೆದುಕೊಳ್ಳುವುದರ ಮೂಲಕ ಆರ್ಸಿಬಿ ಮೇಲಿನ ತಮ್ಮ ಪ್ರೀತಿಯನ್ನು ಕನ್ನಡ ಭಾಷೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಸದ್ಯ ಚಹಾಲ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.