ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಜರುಗಿದ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಡೆಲ್ಲಿ ತಂಡ 15 ರನ್ಗಳ ಸೋಲು ಅನುಭವಿಸಿದ ಬಳಿಕ ನಾಯಕ ರಿಷಬ್ ಪಂತ್ ಫೀಲ್ಡ್ ಅಂಪೈರ್ಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ಕಲೆಹಾಕಿದ 223 ರನ್ ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ಸಾಧಿಸಲು ಕೊನೆಯ ಆರು ಎಸೆತಗಳಲ್ಲಿ 36 ರನ್ಗಳ ಅವಶ್ಯಕತೆ ಇತ್ತು. ಸ್ಟ್ರೈಕ್ನಲ್ಲಿದ್ದ ರೋವ್ಮನ್ ಪೊವೆಲ್ ಅವರು ಮೊದಲ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿದರು. ಆದರೆ ಮೂರನೇ ಎಸೆತವನ್ನು ಫುಲ್ ಟಾಸ್ ಹಾಕಿದ್ದರಿಂದ , ಚೆಂಡು ಸೊಂಟದ ಮೇಲಿದ್ದ ಕಾರಣ ಅದನ್ನು ನೋ ಬಾಲ್ ಎಂದು ಪರಿಗಣಿಸಬೇಕು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಪೈರ್ ವಿರುದ್ದ ವಾದಕ್ಕಿಳಿಯಿತು.
ಈ ವೇಳೆ ನೋ ಬಾಲ್ ನೀಡಲು ಫೀಲ್ಡ್ ಅಂಪೈರ್ಗಳು ನಿರಾಕರಿಸುವುದರ ಜೊತೆಗೆ ಮೂರನೇ ಅಂಪೈರ್ ಸಲಹೆ ಪಡೆಯಲು ಕೂಡ ಮುಂದಾಗಲಿಲ್ಲ. ಇದರಿಂದ ಆವೇಶಕ್ಕೆ ಒಳಗಾದ ಡೆಲ್ಲಿ ನಾಯಕ ಪಂತ್ ರೋವ್ಮನ್ ಪೊವೆಲ್ ಹಾಗೂ ಕುಲ್ದೀಪ್ ಯಾದವ್ ಅವರನ್ನು ಮೈದಾನದಿಂದ ಹೊರಗಡೆ ಬರುವಂತೆ ಸೂಚನೆ ನೀಡಿದರು.
ನಂತರದಲ್ಲಿ, ತಂಡದ ಬ್ಯಾಟಿಂಗ್ ಕೋಚ್ ಪ್ರವೀಣ್ ಆಮ್ರೆ ಮೈದಾನಕ್ಕೆ ತೆರಳಿ ಅಂಪೈರ್ಗಳಿಗೆ ನೋಬಾಲ್ ನೀಡುವಂತೆ ತಿಳಿ ಹೇಳಲು ಪ್ರಯತ್ನಿಸಿದರು. ಇದರಿಂದ ಗೊಂದಲ ಉಂಟಾಗಿ ಆಟವನ್ನು ಮಧ್ಯದಲ್ಲಿಯೇ ಕೆಲ ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ನಂತರದಲ್ಲಿ ಪುನಃ ಪಂದ್ಯವನ್ನು ಮುಂದುವರೆಸಲಾಯಿತು. ಆದರೆ ಕೊನೆಯ 3 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಲು ಸಾಧ್ಯವಾಗಿದ್ದರಿಂದ ಅಂತಿಮವಾಗಿ ರಾಜಸ್ಥಾನ್ 15 ರನ್ಗಳಿಂದ ಜಯಗಳಿಸಿತು.
ಪಂದ್ಯಾವಳಿಯ ನಂತರ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಮಾತನಾಡಿ, "ಆ ಎಸೆತಕ್ಕೆ ನೋ ಬಾಲ್ ತೀರ್ಪು ಕೊಟ್ಟಿದ್ದರೆ, ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿತ್ತು. ಅಂಪೈರ್ಗಳು ಪರಿಶೀಲನೆ ಮಾಡದೇ ಇರುವುದಕ್ಕೆ ಬೇಸರವಾಗಿದೆ. ಆ ಚೆಂಡು ಅಷ್ಟು ಕ್ಲೋಸ್ ಆಗಿರಲಿಲ್ಲ, ಸೊಂಟ ಭಾಗದ ಮೇಲಿರುವುದನ್ನು ಮೈದಾನದಲ್ಲಿರುವ ಪ್ರತಿಯೊಬ್ಬರು ವೀಕ್ಷಿಸಿದ್ದಾರೆ ಎಂದು ಅಂಪೈರ್ ನಿರ್ಣಯದ ಮೇಲೆ ಬೇಸರ ವ್ಯಕ್ತಪಡಿಸಿದ ಅವರು, ಈ ಸಂದರ್ಭದಲ್ಲಿ ವೇಳೆ ಮೂರನೇ ಅಂಪೈರ್ ಮಧ್ಯ ಪ್ರವೇಶಿಸಿ, ನೋ ಬಾಲ್ ಎಂದು ತೀರ್ಪು ನೀಡಬಹುದು ಎಂಬ ನಮ್ಮ ನಿರೀಕ್ಷೆಯು ಸುಳ್ಳಾಗಿದೆ. ನೋ ಬಾಲ್ ವಿಷಯದಲ್ಲಿ ಸರಿಯಾದ ತೀರ್ಪು ನೀಡಿದ್ದರೆ ಪಂದ್ಯದ ಬದಲಾವಣೆಗೆ ಕಾರಣವಾಗುತ್ತಿತ್ತು" ಎಂದರು.
ನೋ ಬಾಲ್ ವಿಚಾರವಾಗಿ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರು ಮೈದಾನದ ಒಳಗೆ ಪ್ರವೇಶಿಸಿ, ಮೂರನೇ ಅಂಪೈರ್ ಅವರಿಗೆ ತಿಳಿ ಹೇಳಲು ಪ್ರಯತ್ನಿಸಿದರು, ಫೀಲ್ಡ್ ಅಂಪೈರ್ಗಳು ಇದನ್ನು ನಿರಾಕರಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂತ್ ನಿಸ್ಸಂಶಯವಾಗಿ ಇದು ಸರಿಯಲ್ಲ. ಆದರೆ, ಮೈದಾನದಲ್ಲಿ ನಮಗೆ ಏನಾಯಿತು ಎಂಬುದು ಕೂಡ ಸರಿಯಲ್ಲ. ಸನ್ನಿವೇಶ ಸ್ವಲ್ಪ ಕಠಿಣವಾಗಿತ್ತು. ಇದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನೋ ಬಾಲ್ ವಿಷಯದಲ್ಲಿ ಅವರು ತಪ್ಪು ಮಾಡಿದ್ದಾರೆಂದು ನನಗೆ ಅನಿಸುತ್ತಿದೆ ಎಂದರು