ಐಪಿಎಲ್ 15ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸೋಲುಗಳನ್ನು ಅನುಭವಿಸಿ ಅಂಕಪಟ್ಟಿಯಲ್ಲಿ ಅತಿ ಕೊನೆಯ ಸ್ಥಾನದಲ್ಲಿರುವುದು ಅಭಿಮಾನಿಗಳಿಗೆ ಅತೀವ ನಿರಾಸೆಯಾಗಿದೆ. ಸೋಲಿನಿಂದ ಕಂಗೆಟ್ಟಿರುವ ಚೆನೈ ತಂಡದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಟೀಕಾ ಪ್ರಹಾರ ಮಾಡಿದ್ದಾರೆ.
ಸಿಎಸ್ಕೆ ತಂಡವು ಪಾಫ್ ಡುಪ್ಲೆಸಿಸ್ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಬಿಟ್ಟುಕೊಡಬಾರದಿತ್ತು. ರಿಟೇನ್ ಮಾಡಿಕೊಂಡು ಮಹೇಂದ್ರ ಸಿಂಗ್ ದೋನಿಯ ಸ್ಥಾನ ಅಂದ್ರೆ ನಾಯಕತ್ವ ವಹಿಸಿದ್ದರೇ ಈ ಅವಮಾನ ಎದುರಿಸುವ ಪ್ರಸಂಗವೇ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸಿಎಸ್ಕೆ ತಂಡವು ಕಳೆದ 14 ಆವೃತ್ತಿಗಳಲ್ಲಿ ಒಟ್ಟು ನಾಲ್ಕು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೂ, ಈ ಆವೃತ್ತಿಯಲ್ಲಿ ಒಂದು ಗೆಲವು ಸಾಧಿಸಲು ಹೆಣಗಾಡುತ್ತಿದೆ. ಈ ಆವೃತ್ತಿಯಲ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಮಹೇಂದ್ರ ಸಿಂಗ್ ಧೋನಿ ನಂತರದ ಸಿಎಸ್ಕೆಯ ಉತ್ತರಾಧಿಕಾರಿಯಾಗಿ ಜಡೇಜಾ ಅವರನ್ನು ನೇಮಿಸಿದರೂ ಒಂದು ಪಂದ್ಯದಲ್ಲಿ ಜಯಗಳಿಸದೇ ಪರಿತಪಿಸುವಂತಾಗಿದೆ.
ಜಡೇಜಾ ಕ್ರಿಕೆಟ್ ಆಟದ ಮೇಲೆ ಗಮನ ಹರಿಸಬೇಕೇ ಹೊರತು ನಾಯಕತ್ವದ ಮೇಲೆ ಅಲ್ಲ. ಏಕೆಂದರೆ ಕಳೆದ ಈ ನಾಲ್ಕು ಪಂದ್ಯಗಳಲ್ಲಿ ನಾಯಕತ್ವದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಮುಕ್ತವಾಗಿ ಆಟವನ್ನು ಪ್ರದರ್ಶಿಸುವಲ್ಲಿ ಹಿಂದೇಟು ಹಾಕಿದ್ದಾರೆ. ಡುಪ್ಲೆಸಿಸ್ರನ್ನು ಕೈ ಬಿಡದೆ, ನಾಯಕತ್ವ ಜವಾಬ್ದಾರಿಗಳನ್ನು ನೀಡಬೇಕಿತ್ತು. ಇದರಿಂದ ಜಡೇಜಾ ಅವರಿಗೆ ಒತ್ತಡ ಕಡೆಮೆಯಾಗುತ್ತಿತ್ತು. ಜೊತೆಗೆ ಪಾಫ್ ಅವರು ಪಂದ್ಯವನ್ನು ಜಯದ ಮಾರ್ಗದತ್ತ ಸಾಗಿಸಿಕೊಂಡು ಹೋಗುವ ಚಾಕಚಕ್ಯತೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಪ್ರಸ್ತುತ ಆರ್ಸಿಬಿ ತಂಡವು ಪಾಫ್ ನಾಯಕತ್ವದಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ವಿಜಯಶಾಲಿಯಾಗಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಒಂದು ಅರ್ಧ ಶತಕದೊಂದಿಗೆ 138ರನ್ ಗಳಿಸಿರುವ ಪಾಫ್ ಆರೆಂಜ್ ಕ್ಯಾಪ್ ರೇಸನಲ್ಲಿ 9 ನೇ ಸ್ಥಾನದಲ್ಲಿದ್ದಾರೆ.