ಸಿರಾಜ್ ಬದಲು ಸಿದ್ಧಾರ್ಥ್ ಕಣಕ್ಕಿಳಿದದ್ದು ಈ ಕಾರಣಕ್ಕಾಗಿ
ಟಾಸ್ ಬಳಿಕ ಮಾತನಾಡಿದ ಫಾಫ್ ಡು ಪ್ಲೆಸಿಸ್ ತಂಡದ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ ಕಣಕ್ಕಿಳಿಯುತ್ತಿದ್ದಾರೆ ಎಂದಿದ್ದು, ಪವರ್ಪ್ಲೇ ಓವರ್ಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಆಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಈ ಮೂಲಕ ಪವರ್ಪ್ಲೇ ಓವರ್ಗಳಲ್ಲಿ ವಿಕೆಟ್ ಕಬಳಿಸುವ ನಿಟ್ಟಿನಿಂದ ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ರನ್ನು ಕಣಕ್ಕಿಳಿಸಲಾಗಿದೆ ಎಂಬುದನ್ನು ಫಾಫ್ ಬಿಚ್ಚಿಟ್ಟಿದ್ದಾರೆ.
ಡೆಲ್ಲಿ ಸೋಲಬೇಕು ಎಂದ ಫಾಫ್
ಇನ್ನೂ ಮುಂದುವರೆದು ಮಾತನಾಡಿದ ಫಾಫ್ ಡು ಪ್ಲೆಸಿಸ್ ಇಂದಿನ ಪಂದ್ಯದಲ್ಲಿ ನಾವು ಗೆಲ್ಲಬೇಕು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮುಂದಿನ ಪಂದ್ಯದಲ್ಲಿ ಸೋಲಬೇಕು ಎಂದರು. ಹೀಗಾಗಿ ಇಂದಿನ ಪಂದ್ಯದಲ್ಲಿ ನಾವು ಹೆಚ್ಚಿನ ವಿಕೆಟ್ ಕಬಳಿಸಬೇಕಿದೆ ಎಂದೂ ಸಹ ಫಾಫ್ ಡು ಪ್ಲೆಸಿಸ್ ಹೇಳಿಕೆ ನೀಡಿದರು.
ಟೂರ್ನಿಯಲ್ಲಿ ಸಿರಾಜ್ ನೀರಸ ಪ್ರದರ್ಶನ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ 13 ಪಂದ್ಯಗಳನ್ನಾಡಿದ್ದು 45 ಓವರ್ ಬೌಲಿಂಗ್ ಮಾಡಿ ಕೇವಲ 8 ವಿಕೆಟ್ ಪಡೆದಿದ್ದಾರೆ. ಹೀಗೆ ಈ ಬಾರಿಯ ಟೂರ್ನಿಯಲ್ಲಿ ಸಿರಾಜ್ ಅಕ್ಷರಶಃ ಮಂಕಾಗಿದ್ದು, ತಂಡದ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದಾರೆ. ಇನ್ನು ಸಿರಾಜ್ ಈ ಬಾರಿ ಬರೋಬ್ಬರಿ 442 ರನ್ಗಳನ್ನು ನೀಡಿದ್ದು ಇದು ಈತ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯೊಂದರಲ್ಲಿ ನೀಡಿದ ಅತ್ಯಧಿಕ ರನ್ ಆಗಿದೆ.