ಈ ತಂಡವೇ ಚಾಂಪಿಯನ್ ಆಗಿ ಹೊರ ಹೊಮ್ಮಲಿ ಎಂದು ಕಾರಣ ತಿಳಿಸಿದ ರೈನಾ
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಬೇಕು ಎಂದು ಸುರೇಶ್ ರೈನಾ ಆಶಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ ಎಂದು ಕೂಡ ಸುರೇಶ್ ರೈನಾ ಹೇಳಿದ್ದಾರೆ. ಕಳೆದ 14 ವರ್ಷಗಳಿಂದ ಐಪಿಎಲ್ ಟೂರ್ನಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವಿರಾಟ್ ಕೊಹ್ಲಿ ಇರುವ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಬೇಕು, ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆಲ್ಲಲಿ ಎಂದು ಸುರೇಶ್ ರೈನಾ ಇಚ್ಛೆ ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆಲ್ಲಲು ಇನ್ನೂ 3 ಪಂದ್ಯ ಗೆಲ್ಲಬೇಕು!
ಇನ್ನು ಪ್ಲೇ ಆಫ್ ಸುತ್ತಿಗೆ ನಾಲ್ಕನೇ ತಂಡವಾಗಿ ಪ್ರವೇಶ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲಿಗೆ ಬುಧವಾರ ನಡೆಯಲಿರುವ ಎಲಿಮಿನೇಟರ್ ಸುತ್ತಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಶುಕ್ರವಾರ ನಡೆಯುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋತು ಬಂದ ತಂಡದ ಜೊತೆ ಫಾಫ್ ಡು ಪ್ಲೆಸಿಸ್ ಬಳಗ ಸೆಣಸಾಡಲಿದೆ ಹಾಗೂ ಈ ಪಂದ್ಯದಲ್ಲಿ ಗೆದ್ದರೆ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಈ ಮೂಲಕ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರಹೊಮ್ಮಿ ಇತಿಹಾಸ ಬರೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸಿಗೆ ಪೆಟ್ಟು ನೀಡುತ್ತಾ ಮಳೆ?
ಇನ್ನು ಚಾಂಪಿಯನ್ ಆಗಬೇಕೆನ್ನುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಸೆಗೆ ಈ ಬಾರಿ ಮಳೆ ಕಂಟಕವಾಗುವ ಸಾಧ್ಯತೆಗಳಿವೆ. ಹೌದು, ಕೋಲ್ಕತ್ತಾದಲ್ಲಿ ಮಳೆ ಅವಾಂತರವನ್ನು ಉಂಟುಮಾಡಿದೆ, ಇಲ್ಲಿಯೇ ನಡೆಯಲಿರುವ ಪ್ಲೇ ಆಫ್ ಪಂದ್ಯಗಳ ಮೇಲೆ ವರುಣನ ವಕ್ರದೃಷ್ಟಿ ಬಿದ್ದಂತಿದೆ. ಇನ್ನು ಪ್ಲೇ ಆಫ್ ಸುತ್ತಿನ ಪಂದ್ಯಗಳ ವೇಳೆ ಮಳೆ ಬಂದು ವಿಳಂಬವಾದರೆ ಸೂಪರ್ ಓವರ್ ಮೂಲಕ ಫಲಿತಾಂಶ ಹೊರ ತರುವ ಯತ್ನ ನಡೆಯಲಿದೆ. ಒಂದುವೇಳೆ ಸೂಪರ್ ಓವರ್ ಕೂಡ ನಡೆಸಲು ಆಗದೇ ಇದ್ದರೆ ಲೀಗ್ ಹಂತದಲ್ಲಿ ಹೆಚ್ಚು ಅಂಕ ಗಳಿಸಿದ ತಂಡ ಮುಂದಿನ ಪಂದ್ಯಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಪ್ಲೇ ಆಫ್ ಪ್ರವೇಶಿಸಿರುವ ಎಲ್ಲಾ ತಂಡಗಳಿಗಿಂತ ಕಡಿಮೆ ಅಂಕ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ನಿಯಮ ಹಿನ್ನಡೆಯುಂಟುಮಾಡುವ ದೊಡ್ಡ ತಲೆನೋವು ಎದುರಾಗಿದೆ.