ಐಪಿಎಲ್ 15ನೇ ಆವೃತ್ತಿ ರೋಚಕ ಹಂತವನ್ನು ತಲುಪಿದೆ. ಎಲ್ಲಾ ತಂಡಗಳು ಕೂಡ ಈ ಹಂತದಲ್ಲಿ ತೀವ್ರ ಪೈಪೋಟಿಯನ್ನು ನಡೆಸುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಪಂಡಿತರು ಕೂಡ ಟೂರ್ನಿಯ ಬಗ್ಗೆ ಸಾಕಷ್ಟು ಕುತೂಹಲ ಕಾತರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಇರ್ಫಾನ್ ಪಠಾಣ್ ಕನ್ನಡಿಗ ಕ್ರಿಕೆಟಿಗನ ಬಗ್ಗೆ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಈ ಬಾರಿಯೂ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ 11 ಪಂದ್ಯಗಳಲ್ಲಿ ಕೆಎಲ್ ರಾಹುಲ್ 451 ರನ್ಗಳನ್ನು ಗಳಿಸಿದ್ದು ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಲ್ಕತ್ತಾ ನಯಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ದುರದೃಷ್ಟಕರ ರೀತಿಯಲ್ಲಿ ಒಂದೂ ಎಸೆತ ಎದುರಿಸದೆ ರನೌಟ್ ಆಗಿ ನಿರಾಸೆ ಅನುಭವಿಸಿದ್ದಾರೆ.
ಆದರೆ ಟೂರ್ನಿಯಲ್ಲಿ ನೀಡಿರುವ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಕೆಎಲ್ ರಾಹುಲ್ ಓರ್ವ ಚಾಣಾಕ್ಷ ಆಟಗಾರ. ಆತ ಯಾವುದೇ ಕ್ರಮಾಂಕದಲ್ಲಿಯಾದರೂ ಆಡಲು ಸಮರ್ಥವಾಗಿರುವ ಆಟಗಾರ. ಆತ ಅದನ್ನು ಭಾರತ ತಂಡದ ಪರವಾಗಿ ಆಡಿ ತೋರಿಸಿದ್ದಾರೆ. ಇಂಥಾ ಸಾಧನೆಯನ್ನು ಆತ ನಿಜಕ್ಕೂ ಅತ್ಯಂತ ಪ್ರತಿಭಾವಂತಬಾಗಿದ್ದರೆ ಮಾತ್ರವೇ ಸಾಧ್ಯವಾಗಲಿ" ಎಂದಿದ್ದಾರೆ ಇರ್ಫಾನ್ ಪಠಾಣ್.
ಅತ್ಯಂತ ಮೌಲ್ಯಯುತ ಆಟಗಾರ: ಇನ್ನು ಮುಂದುವರಿದು ಮಾತನಾಡಿದ ಇರ್ಫಾನ್ ಪಠಾಣ್ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಅತ್ಯಂತ ಮೌಲ್ಯಯುತ ಆಟಗಾರ ಎಂದಿದ್ದಾರೆ. ವಿಭಿನ್ನ ರೀತಿ, ಮನಸ್ಥಿತಿಯಲ್ಲಿ ಆಡುವ ಸಾಮರ್ಥ್ಯವಿರುವ ಕಾರಣದಿಂದಾಗಿ ಕೆಎಲ್ ರಾಹುಲ್ ಅತ್ಯಂತ ಮೌಲ್ಯಯುತ ಆಟಗಾರ ಎಂದಿದ್ದಾರೆ ಇರ್ಪಾನ್ ಪಠಾಣ್.
ಇನ್ನು ಮಾಜಿ ಟೀಮ್ ಇಂಡಿಯಾ ಆಟಗಾರ ಸುರೇಶ್ ರೈನಾ ಕೂಡ ಕೆಎಲ್ ರಾಹುಲ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಕೆಎಲ್ ರಾಹುಲ್ ಈಗ ಅತ್ಯುತ್ತಮ ಮನಸ್ಥಿತಿಯಲ್ಲಿದ್ದಾರೆ. ಅತ್ಯಂತ ಸಕಾರಾತ್ಮಕ ಮನಸ್ಥಿತಿಯಲ್ಲಿ ಅವರು ಆಡುತ್ತಿದ್ದಾರೆ. ಅದ್ಭುತವಾದ ಹೊಡೆತಗಳನ್ನು ಬಾರಿಸುವ ಮೂಲಕ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ" ಎಂದು ರೈನಾ ಹೇಳಿಕೆ ನೀಡಿದ್ದಾರೆ.