ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿನ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಪ್ಲೇ-ಆಫ್ ರೇಸ್ನಿಂದ ಬಹುತೇಕ ನಿರ್ಗಮನದ ಅಂಚಿಗೆ ತಲುಪಿದೆ.
ಒಟ್ಟು 10 ತಂಡಗಳ ಐಪಿಎಲ್ ಲೀಗ್ನಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದು, ಸಿಎಸ್ಕೆ ಈಗ ಆಡಿದ 10 ಪಂದ್ಯಗಳಲ್ಲಿ ಏಳನ್ನು ಸೋತಿದ್ದು, ಮೂರರಲ್ಲಿ ಮಾತ್ರ ಗೆಲುವು ಕಂಡಿದ್ದಾರೆ. ಆದರೆ ಈವರೆಗೂ ತಂಡದ ಸಂಯೋಜನೆ ಬಗ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಐಪಿಎಲ್ 15ನೇ ಋತುವಿನ ಆರಂಭದಲ್ಲಿ ರವೀಂದ್ರ ಜಡೇಜಾರನ್ನು ಸಿಎಸ್ಕೆ ನಾಯಕನನ್ನಾಗಿ ನೇಮಿಸಲಾಯಿತು. ಎಂಟು ಪಂದ್ಯಗಳ ನಂತರ ಎಂಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು ಮತ್ತು ರವೀಂದ್ರ ಜಡೇಜಾ ತಮ್ಮ ವೈಯಕ್ತಿಕ ಆಟದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು. ಆದರೂ ಮತ್ತೆ ಮತ್ತೆ ವಿಫಲರಾಗುತ್ತಿದ್ದಾರೆ. ಜೊತೆಗೆ ಉಳಿದ ವಿಭಾಗಗಳಲ್ಲೂ ಲೋಪಗಳಿವೆ.
ಇದೆಲ್ಲವೂ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಅತೃಪ್ತಿಗೊಳಿಸಿದ್ದು, "ಸಿಎಸ್ಕೆ ಮಾಡಿದ ಮೊದಲ ತಪ್ಪೆನೆಂದರೆ ಈ ಋತುವಿನ ಆರಂಭದಲ್ಲಿ ಎಂಎಸ್ ಧೋನಿ ನಾಯಕನಾಗುವುದಿಲ್ಲ ಮತ್ತು ರವೀಂದ್ರ ಜಡೇಜಾ ನೂತನ ನಾಯಕ ಎಂದು ಘೋಷಿಸಿರುವುದು.
"ಜಡೇಜಾರನ್ನು ನಾಯಕನನ್ನಾಗಿ ಮಾಡಿರುವುದು ತಪ್ಪು ನಿರ್ಧಾರ. ಜಡೇಜಾ ಅವರು ನಾಯಕನಾಗಿದ್ದರೆ, ಉಳಿದ ಸೀಸನ್ಗಳಿಗೂ ಅವರನ್ನು ಉಳಿಸಿಕೊಳ್ಳಬೇಕಾಗಿತ್ತು," ಎಂದು ಸಿಎಸ್ಕೆ ಆರ್ಸಿಬಿ ವಿರುದ್ಧ 13 ರನ್ನಿಂದ ಸೋತು ಪ್ಲೇಆಫ್ ಸ್ಪರ್ಧೆಯಿಂದ ಹೆಚ್ಚು ಕಡಿಮೆ ಹೊರಬಿದ್ದ ನಂತರ ವೀರೇಂದ್ರ ಸೆಹ್ವಾಗ್ ಕ್ರಿಕ್ಬಜ್ಗೆ ಹೇಳಿದರು.
"ಸಿಎಸ್ಕೆಗೆ ಸೆಟಲ್ ಪ್ಲೇಯಿಂಗ್ ಇಲೆವೆನ್ ಇರಲಿಲ್ಲ. ಆರಂಭದಲ್ಲಿ ರುತುರಾಜ್ ಗಾಯಕ್ವಾಡ್ ರನ್ ಗಳಿಸಲಿಲ್ಲ. ಉಳಿದ ಬ್ಯಾಟರ್ಗಳು ರನ್ ಗಳಿಸಲಿಲ್ಲ. ಒಂದು ಪಂದ್ಯದಲ್ಲಿ ಎಂಎಸ್ ಧೋನಿ ಸ್ಕೋರ್ ಮಾಡಿದರು, ಇನ್ನೊಂದು ಪಂದ್ಯದಲ್ಲಿ ಗಾಯಕ್ವಾಡ್ ಸ್ಕೋರ್ ಮಾಡಿದರು. ಕೊನೆಯ ಪಂದ್ಯದಲ್ಲಿ ಧೋನಿ ಬೌಂಡರಿ ಬಾರಿಸಿದ ಪಂದ್ಯ, ಕಳಪೆಯಾಗಿ ಶುರುಮಾಡಿದ್ದರು. ಬಹುತೇಕ ಸೋತಿತ್ತು, ಆದರೆ ಅದೃಷ್ಟದಿಂದ ಗೆಲುವು ಸಾಧಿಸಿತು," ಎಂದರು.
ಸಿಎಸ್ಕೆ ಕೆಲವು ಬ್ಯಾಟ್ಸ್ಮನ್ಗಳು ಸ್ಕೋರ್ ಮಾಡಲಿಲ್ಲ, ಆದ್ದರಿಂದ ಹಲವು ಪಂದ್ಯಗಳಲ್ಲಿ ಸೋತರು. ಸೀಸನ್ನ ಆರಂಭದಿಂದಲೂ ಎಂಎಸ್ ಧೋನಿ ನಾಯಕನಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಮತ್ತು ಬಹುಶಃ ಸಿಎಸ್ಕೆಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.
ಕಳೆದ ರಾತ್ರಿಯ ಪಂದ್ಯದಲ್ಲಿ, ಹರ್ಷಲ್ ಪಟೇಲ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಕ್ಲಿನಿಕಲ್ ಬೌಲಿಂಗ್ ಪ್ರದರ್ಶನದ ಕಾರಣದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 13 ರನ್ಗಳ ಅಮೋಘ ಜಯವನ್ನು ದಾಖಲಿಸಿತು. ಇದರೊಂದಿಗೆ ಈ ಬಾರಿಯ ಐಪಿಎಲ್ನಿಂದ ಹಾಲಿ ಚಾಂಪಿಯನ್ಗಳನ್ನು ಹೊರಹಾಕಲು ಮುನ್ನುಡೆ ಬರೆಯಿತು.
ಆರ್ಸಿಬಿ ಪರವಾಗಿ 27 ಎಸೆತಗಳಲ್ಲಿ 42 ರನ್ ಗಳಿಸಿದ ಮಹಿಪಾಲ್ ಲೊಮ್ರೋರ್, ನಾಯಕ ಫಾಫ್ ಡು ಪ್ಲೆಸಿಸ್ (22 ಎಸೆತಗಳಲ್ಲಿ 38), ವಿರಾಟ್ ಕೊಹ್ಲಿ (33 ಎಸೆತಗಳಲ್ಲಿ 30) ಮತ್ತು ದಿನೇಶ್ ಕಾರ್ತಿಕ್ (ಔಟಾಗದೆ 27) ಸಹಾಯದಿಂದ ಆರ್ಸಿಬಿ 8 ವಿಕೆಟ್ಗೆ 173 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ಉತ್ತಮ ಆರಂಭ ಕಂಡಿತ್ತು.
ಆರಂಭಿಕ ಆಟಗಾರ ಡೆವೊನ್ ಕಾನ್ವೆ (56) ಅವರ ಅರ್ಧಶತಕದ ಹೊರತಾಗಿಯೂ ಆರ್ಸಿಬಿ ಬೌಲರ್ಗಳು ಹಾಲಿ ಚಾಂಪಿಯನ್ಗಳನ್ನು 8 ವಿಕೆಟ್ಗೆ 160 ರನ್ಗಳಿಗೆ ಕಟ್ಟಿ ಹಾಕಿದರು ಮತ್ತು ಅಮೂಲ್ಯ ಎರಡು ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ಜಿಗಿದರು.