ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಪಂದ್ಯ ಲೋ ಸ್ಕೋರಿಂಗ್ ಪಂದ್ಯವಾಗಿದ್ದರೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದೆ. ಅಂತಿಮ ಹಂತದವರೆಗೂ ಸಾಗಿದ್ದ ಈ ಪಂದ್ಯದಲ್ಲಿ ಆರ್ಸಿಬಿ ಅಂತಿಮವಾಗಿ ಗೆಲುವಿನ ನಗೆ ಬೀರುವ ಮೂಲಕ ಮೇಲುಗೈ ಸಾಧಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಫಾಫ್ ಡು ಪ್ಲೆಸಿಸ್ ಬಳಗ ಸಿದ್ಧವಾಗಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ಪಡೆ ಕೇವಲ 128 ರನ್ಗಳಿಸಿ ಆಲೌಟ್ ಆಗಿತ್ತು. ಇದನ್ನು ಬೆನ್ನಟ್ಟಿದ ಆರ್ಸಿಬಿ ತಂಡ ಕುಡ ಭಾರೀ ಪರದಾಟವನ್ನು ನಡೆಸಿ ಅಂತಿಮವಾಗಿ 3 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರದರ್ಶಿಸಿದ ಹೋರಾಟದ ಬಗ್ಗೆ ನಾಯಕ ಶ್ರೇಯಸ್ ಐಯ್ಯರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಚೆನ್ನಾಗಿ ಬೌಲಿಂಗ್ ಮಾಡಿದ್ರೆ, ವಿಶ್ವಕಪ್ಗೆ ನೇರವಾಗಿ ಆಯ್ಕೆ: ಸುನಿಲ್ ಗವಾಸ್ಕರ್
"ನಿಜಕ್ಕೂ ಈ ಪಂದ್ಯ ಅತ್ಯಂತ ರೋಮಾಂಚನಕಾರಿಯಾಗಿತ್ತು. ನಾವು ಫೀಲ್ಡಿಂಗ್ಗೆ ಇಳಿಯುವ ಮುನ್ನ ತಂಡದ ಆಟಗಾರರ ಜೊತೆಗೆ ಮಾತನಾಡಿದ್ದೆ. ಈ ಸಂದರ್ಭದಲ್ಲಿ 'ಅವರಿಗೆ ಈ ಪಂದ್ಯವನ್ನು ರಕ್ಷಿಸಿಕೊಳ್ಳುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಅಂಗಳದಲ್ಲಿ ನಮ್ಮ ವ್ಯಕ್ತಿತ್ವ ಮತ್ತು ಮನೋವೃತ್ತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದ್ದೆ. ಅದಕ್ಕೆ ಪೂರಕವಾಗಿ ನಾವು ಅಂಗಳದಲ್ಲಿ ಪ್ರದರ್ಶಿಸಿದ ಹೋರಾಟ ಮುಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ಪ್ರತಿಬಿಂಬಿಸುತ್ತದೆ" ಎಂದಿದ್ದಾರೆ ಕೆಕೆಆರ್ ನಾಯಕ ಶ್ರೇಯಸ್ ಐಯ್ಯರ್.
"ಈ ಪಂದ್ಯದಲ್ಲಿ ನಾವು ಆಡಿದ ರೀತಿಗೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ನಾವು ಈ ಪಂದ್ಯವನ್ನು ಕೊನೆಯ ಓವರ್ ತನಗ ತೆಗೆದುಕೊಂಡು ಹೋಗಿದ್ದೆವು. ಒಂದು ಹಂತದಲ್ಲಿ ನಮಗೆ ಬಹಳ ಕಷ್ಟವಾಗಿತ್ತು. ಅವರ ವಿಕೆಟ್ ಪಡೆಯಲು ನಮ್ಮ ತಂಡದ ಅತ್ಯುತ್ತಮ ಬೌಲರ್ಗಳನ್ನು ಬಳಸಿಕೊಂಡು ಕೆಲ ವಿಕೆಟ್ಗಳನ್ನು ಶೀಘ್ರವಾಗಿ ಪಡೆಯಲು ನಿರ್ಧರಿಸಿದ್ದೆ. ಆದರೆ ಆ ಯೋಜನೆ ಚೆನ್ನಾಗಿ ಕಾರ್ಯನಿರ್ವಹಿಸಲಿಲ್ಲ. ಇದಕ್ಕಾಗಿ ಅವರ ಬ್ಯಾಟರ್ಗಳನ್ನು ಅಭಿನಂದಿಸಬೇಕು. ಮಧ್ಯಮ ಓವರ್ಗಳಲ್ಲಿ ಅವರು ಅತ್ಯುತ್ತಮವಾಗಿ ಆಡಿದ್ದಾರೆ" ಎಂದು ಶ್ರೇಯಸ್ ಐಯ್ಯರ್ ಆರ್ಸಿಬಿ ಬ್ಯಾಟಿಂಗ್ ವಿಭಾಗವನ್ನು ಪ್ರಶಂಸಿಸಿದರು.
ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ಅದ್ಭುತ ಪ್ರದರ್ಶನ್ನು ನೀಡಲು ಯಶಸ್ವಿಯಾಗಿತ್ತು. ಅದರಲ್ಲೂ ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ದಾಳಿ ಅತ್ಯಂತ ಪರಿಣಾಮಕಾರಿಯಾಗಿತ್ತು. ಆಕಾಶ್ ದೀಪ್ ಕೂಡ 3 ವಿಕೆಟ್ ಪಡೆಯಲು ಯಶಸ್ವಿಯಾಗಿದ್ದರು ಕೂಡ ರನ್ ನಿಯಂತ್ರಣ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 128 ರನ್ಗಳಿಗೆ ಆಳೌಟ್ ಮಾಡಿತ್ತು ಆರ್ಸಿಬಿ.
RCB vs KKR: ಕೆಕೆಆರ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಆರ್ಸಿಬಿ
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಆರ್ಸಿಬಿ ತಂಡ ಕೂಡ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತು. ಆದರೆ ಮಧ್ಯಮ ಓವರ್ಗಳಲ್ಲಿ ಶರ್ಫನ್ ರುದರ್ಫೋರ್ಡ್ ಹಾಗೂ ಶಹ್ಬಾಜ್ ಅಹ್ಮದ್ ಉತ್ತಮ ಜೊತೆಯಾಟವನ್ನು ನೀಡುವ ಮೂಲಕ ಆರ್ಸಿಬಿ ಕುಸಿತವನ್ನು ತಡೆದರು. ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ 7 ಎಸೆತಗಳಲ್ಲಿ 14 ರನ್ಗಳಿಸುವ ಮೂಲಕ ಆರ್ಸಿಬಿ ಗೆಲುವನ್ನು ಸಾರಿದರು.
ಆರ್ಸಿಬಿ ಪ್ಲೇಯಿಂಗ್ 11: ಫಾಫ್ ಡುಪ್ಲೆಸಿಸ್(ಸಿ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಶೆರ್ಫೇನ್ ರುದರ್ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಕೆಕೆಆರ್ ಪ್ಲೇಯಿಂಗ್ 11: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ