ಅಂತಿಮ ಓವರ್ನಲ್ಲಿ ಪೊಲಾರ್ಡ್ ವಿಕೆಟ್ ಪಡೆದು ಸಂಭ್ರಮಿಸಿದ ಕೃನಾಲ್
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಪಂದ್ಯದ ಅಂತಿಮ ಓವರ್ನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಿದರೆ, ಕೀರನ್ ಪೊಲಾರ್ಡ್ ಮೊದಲನೇ ಎಸೆತವನ್ನು ಎದುರಿಸಿದರು. ಮೊದಲನೇ ಎಸೆತದಲ್ಲಿಯೇ ಕೀರನ್ ಪೊಲಾರ್ಡ್ ದೀಪಕ್ ಹೂಡಾಗೆ ಕ್ಯಾಚ್ ನೀಡಿ ಬೇಸರದಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಕೀರನ್ ಪೊಲಾರ್ಡ್ ಬಳಿ ಬಂದ ಕೃನಾಲ್ ಪಾಂಡ್ಯ ಪೊಲಾರ್ಡ್ ಮೇಲೆ ಹಾರಿ ತಬ್ಬಿಕೊಂಡು ಪೊಲಾರ್ಡ್ ತಲೆಗೆ ಮುತ್ತಿಟ್ಟಿದ್ದಾರೆ. ಹೀಗೆ ವಿಕೆಟ್ ಪಡೆದ ಬರದಲ್ಲಿ ಕೃನಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ವಿವಾದದ ರೂಪ ಪಡೆದುಕೊಂಡಿದೆ.
ಕೃನಾಲ್ ನಡೆಗೆ ಕೋಪಗೊಂಡ ಪೊಲಾರ್ಡ್
ಇನ್ನು ಕೃನಾಲ್ ಪಾಂಡ್ಯ ನಡೆಗೆ ಕೀರನ್ ಪೊಲಾರ್ಡ್ ಕೋಪಗೊಂಡಿದ್ದಾರೆ. ಕಳೆದ ಆವೃತ್ತಿಗಳಲ್ಲಿ ಈ ಇಬ್ಬರೂ ಒಂದೇ ತಂಡದ ಪರ ಕಣಕ್ಕಿಳಿದು ಪರಸ್ಪರ ಉತ್ತಮ ಸ್ನೇಹವನ್ನು ಹೊಂದಿದ್ದರೂ ಸಹ ಈ ಬಾರಿ ಮುಂಬೈ ಇಂಡಿಯನ್ಸ್ ಸಾಲು ಸಾಲು ಸೋಲು ಕಂಡಿರುವ ಕಾರಣ ಕೀರನ್ ಪೊಲಾರ್ಡ್ ಮೊದಲೇ ಬೇಸರದಲ್ಲಿದ್ದರು. ಇಂಥ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಈ ರೀತಿ ನಡೆದುಕೊಂಡದ್ದು ಪೊಲಾರ್ಡ್ಗೆ ಇಷ್ಟವಾಗಲಿಲ್ಲ ಎಂಬುದು ಪೊಲಾರ್ಡ್ ಮುಖದ ಹಾವಭಾವದಲ್ಲೇ ತಿಳಿಯುತ್ತಿತ್ತು. ಸಾಮಾನ್ಯವಾಗಿ ಎದುರಾಳಿ ತಂಡದ ಆಟಗಾರ ಕೆಣಕಿದಾಗಲೆಲ್ಲಾ ಸ್ಥಳದಲ್ಲಿಯೇ ಸರಿಯಾದ ಉತ್ತರ ನೀಡುವ ಪೊಲಾರ್ಡ್ ಯಾವುದೇ ಪ್ರತಿಕ್ರಿಯೆ ನೀಡದೇ ಕೋಪದ ಮುಖ ಹೊತ್ತು ಮೈದಾನದಿಂದ ಹೊರನಡೆದರು.
ಇದು ತಪ್ಪು ಎಂದ ಸುನಿಲ್ ಗವಾಸ್ಕರ್
ಇದೇ ಸಂದರ್ಭದಲ್ಲಿ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೃನಾಲ್ ಪಾಂಡ್ಯ ಈ ರೀತಿ ಮಾಡಬಾರದಿತ್ತು, ಖಂಡಿತ ಇದು ಪೊಲಾರ್ಡ್ಗೆ ಇಷ್ಟವಾಗಿಲ್ಲ ಎಂದು ಹೇಳಬಲ್ಲೆ, ಸ್ನೇಹವನ್ನು ಮೈದಾನದಿಂದ ಹೊರಗಿಟ್ಟುಕೊಳ್ಳಬೇಕು ಎಂದು ಹೇಳಿದರು.