ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡ ಗಂಭೀರ್
ಆರ್ಸಿಬಿ ಇನಿಂಗ್ಸ್ನ 15ನೇ ಓವರ್ನಲ್ಲಿ ಈ ಘಟನೆ ನಡೆದಿದ್ದು, LSG ನಾಯಕ ಕೆಎಲ್ ರಾಹುಲ್ ಮಿಡ್-ಆಫ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು ಮತ್ತು ದಿನೇಶ್ ಕಾರ್ತಿಕ್ ಅವರು ಮೊಹ್ಸಿನ್ ಖಾನ್ ಅವರ ಬೌಲಿಂಗ್ನಲ್ಲಿ ಟಾಪ್ ಎಡ್ಜ್ ಮಾಡಿದರು. ಚೆಂಡು ಗಾಳಿಯಲ್ಲಿ ತೇಲುತ್ತಾ ರಾಹುಲ್ ಕೈಗೆ ಸಿಕ್ಕಿತ್ತು. ಆದರೆ ಕೈ ನೆಲಕ್ಕೆ ತಾಗುತ್ತಿದ್ದಂತೆ ಬಾಲ್ ಕೈಯಿಂದ ಜಾರಿತು. ಕ್ಯಾಚ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಆರಂಭದಲ್ಲಿ ರಾಹುಲ್ ಕ್ಲೀನ್ ಕ್ಯಾಚ್ ತೆಗೆದುಕೊಂಡಿದ್ದಾರೆ ಎಂದು ಭಾವಿಸಿ ಚಪ್ಪಾಳೆ ತಟ್ಟುತ್ತಿದ್ದರು. ಆದರೆ, ಗಂಭೀರ್ ಪ್ರತಿಕ್ರಿಯೆ ತಕ್ಷಣವೇ ಬದಲಾಯಿತು. ನಿರಾಶೆಯಿಂದ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರು. ತಕ್ಷಣ ಕೋಪಿಸಿಕೊಂಡರು. ಆಗ ಕಾರ್ತಿಕ್ ಎರಡು ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ನಂತರ ಕೊನೆಯವರೆಗೂ ಆಡಿ 37 ರನ್ ಬಾರಿಸಿದರು.
14 ರನ್ಗಳ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ
ಐಪಿಎಲ್ ಎಲಿಮಿನೇಟರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 14 ರನ್ಗಳ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ ಎಂದು ನಿರಾಶೆಗೊಂಡ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಆರ್ಸಿಬಿಯ ರಜತ್ ಪಾಟಿದಾರ್ ಅವರ ಅದ್ಭುತ ಶತಕವನ್ನು ಎರಡು ತಂಡಗಳ ನಡುವಿನ ವ್ಯತ್ಯಾಸವೆಂದು ಒಪ್ಪಿಕೊಂಡರು. 28 ವರ್ಷದ ಇಂದೋರ್ನ ಪಾಟಿದಾರ್ 54 ಎಸೆತಗಳಲ್ಲಿ 112 ರನ್ ಗಳಿಸಿ ಏಕಾಂಗಿಯಾಗಿ ಬ್ಯಾಟ್ ಬೀಸಿ ಐಪಿಎಲ್ ಎಲಿಮಿನೇಟರ್ ಆರ್ಸಿಬಿಗೆ ಗೆದ್ದುಕೊಟ್ಟರು.
ಸುಲಭ ಕ್ಯಾಚ್ ಬಿಡುವುದು ಎಂದಿಗೂ ಸಹಾಯ ಮಾಡಲ್ಲ
"ಇದು ಸಾಕಷ್ಟು ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ, ನಾವು ಗೆಲ್ಲದಿರಲು ಹಲವು ಕಾರಣಗಳು. ನಾವೇ ಕ್ಷೇತ್ರ ರಕ್ಷಣೆಯಲ್ಲಿ ಸುಲಭ ಕ್ಯಾಚ್ಗಳನ್ನು ಬಿಡುವುದು ಎಂದಿಗೂ ಸಹಾಯ ಮಾಡುವುದಿಲ್ಲ. ವ್ಯತ್ಯಾಸವೆಂದರೆ ಪಾಟಿದಾರ್ ಅಂತಹ ಬ್ಯಾಟಿಂಗ್ ಮಾಡುತ್ತಿದ್ದರು. ಅಗ್ರ ಮೂರರಲ್ಲಿ ಇರುವವರು ನೂರು ಸ್ಕೋರ್ ಮಾಡಿದಾಗ ಹೆಚ್ಚಾಗಿ ತಂಡ ಗೆಲ್ಲುತ್ತದೆ," ಎಂದು ಕೆಎಲ್ ರಾಹುಲ್ ಪಂದ್ಯದ ನಂತರ ಹೇಳಿದರು.
ಶತಕದ ಹಾದಿಯಲ್ಲಿ ರಜತ್ ಪಾಟಿದಾರ್ ಅವರ ಕ್ಯಾಚ್ನ್ನು ಮೂರು ಬಾರಿ ಕೈಬಿಡಲಾಯಿತು ಮತ್ತು ರಾಹುಲ್ ಅವರ ತಂಡದ ಫೀಲ್ಡಿಂಗ್ನಿಂದ ನಿರಾಸೆಗೊಂಡರು. "ಅವರು ನಿಜವಾಗಿಯೂ ಚೆನ್ನಾಗಿ ಫೀಲ್ಡಿಂಗ್ ಮಾಡಿದರು ಮತ್ತು ನಾವು ಕಳಪೆಯಾಗಿದ್ದೇವೆ," ಎಂದು ಅವರು ಸಂಕ್ಷಿಪ್ತವಾಗಿ ಒಪ್ಪಿಕೊಂಡರು.
ಬಹಳಷ್ಟು ಧನಾತ್ಮಕ ಅಂಶಗಳನ್ನು ಕಂಡುಕೊಂಡಿದ್ದೇವೆ
ಆದಾಗ್ಯೂ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮೊದಲ ಋತುವಿನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿದ್ದಕ್ಕಾಗಿ ಕೆಎಲ್ ರಾಹುಲ್ ಸಂತೋಷಪಟ್ಟರು. "ನಾವು ಬಹಳಷ್ಟು ಧನಾತ್ಮಕ ಅಂಶಗಳನ್ನು ಕಂಡುಕೊಂಡಿದ್ದೇವೆ. ಇದು ಹೊಸ ಫ್ರಾಂಚೈಸ್ ಆಗಿದೆ. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ, ಪ್ರತಿ ತಂಡವು ಅದನ್ನು ಮಾಡುತ್ತದೆ. ಪ್ರಯತ್ನಿಸಬೇಕು ಮತ್ತು ಬಲವಾಗಿ ಹಿಂತಿರುಗಬೇಕು. ಇದೊಂದು ಯುವ ತಂಡ. ಅವರು ತಮ್ಮ ತಪ್ಪುಗಳಿಂದ ಕಲಿಯುತ್ತಾರೆ, ಮನೆಗೆ ಹಿಂತಿರುಗುತ್ತಾರೆ ಮತ್ತು ಉತ್ತಮ ಆಟಗಾರರಾಗಲು ಪ್ರಯತ್ನಿಸುತ್ತಾರೆ," ಎಂದು ತಿಳಿಸಿದರು.