ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಲೀಗ್ ಹಂತದ ಪಂದ್ಯ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಆದರೆ ಗೆಲ್ಲಲೇ ಬೇಕಿದ್ದ ಒತ್ತಡದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ ತಂಡ ತನ್ನದೇ ಆದ ಕೆಲ ತಪ್ಪುಗಳಿಂದಾಗಿ ಸೋಲು ಕಾಣುವಂತಾಯಿತು. ಈ ಸೋಲಿನಿಂದಾಗಿ ಪ್ಲೇಆಫ್ಗೇರುವ ಅವಕಾಶವನ್ನು ರಿಷಭ್ ಪಂತ್ ಪಡೆ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ 160 ರನ್ಗಳ ಗುರಿ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಹಂತದಲ್ಲಿ ಎಡವಿತ್ತು. ಕ್ಯಾಚ್ ಪಡೆದಿದ್ದರೂ ಅಂಪಾಯರ್ ನಿರಾಕರಿಸಿದಾಗ ಡಿಆರ್ಎಸ್ ಮೊರೆ ಹೋಗದೆ ಅವಕಾಶ ಕಳೆದುಕೊಂಡ ಡೆಲ್ಲಿ ನಾಯಕ ಅದಕ್ಕೂ ಮುನ್ನ ಡೆವಾಲ್ಡ್ ಬ್ರೇವಿಸ್ ಅವರ ಸುಲಭ ಕ್ಯಾಚ್ವೊಂದನ್ನು ಕೂಡ ಕೈಚೆಲ್ಲಿದ್ದರು. ಸ್ವತಃ ನಾಯಕನಿಂದಲೇ ಆದ ಈ ಎಡವಟ್ಟುಗಳಿಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ ಒತ್ತಡದ ಸಂದರ್ಭದಲ್ಲಿ ಇಂತಾ ಎಡವುವಿಕೆಗಳು ಸಹಜವಾಗಿರುತ್ತದೆ ಎಂದಿದ್ದಾರೆ.
ರಿಷಭ್ ಪಂತ್ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಮೆಚ್ಚುಗೆಯ ಮಾತುಗಳನ್ನಾಡಿದ್ದು ಪಂತ್ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. "ಆತನೋರ್ವ ಗುಣಮಟ್ಟದ ನಾಯಕ ಎಂಬುದರಲ್ಲಿ ಅನುಮಾನವಿಲ್ಲ. ಕಳೆದ ಆವೃತ್ತಿಯಲ್ಲಿ ಆತ ಯಾವ ರೀತಿಯಾಗಿ ತಂಡವನ್ನು ಮುನ್ನಡೆಸಿದ್ದರು ಎಂಬುದನ್ನು ನೋಡಿದ್ದೇವೆ. ಕೆಲ ಸಂದರ್ಭಗಳಲ್ಲಿ ಎಲ್ಲವೂ ನಾವಂದುಕೊಂಡಂತೆಯೇ ನಡೆಯುವುದಿಲ್ಲ. ನಾನು ಕೂಡ ಈ ಹಿಂದೆ ಇಂಥಾದ್ದೆ ಸಂದರ್ಭಗಳನ್ನು ಎದುರಿಸಿ ಬಂದಿದ್ದದೇನೆ. ಅದನ್ನೇ ನಾನು ಅವನಿಗೂ ಹೇಳಲು ಇಚ್ಚಿಸುತ್ತೇನೆ. ಇಂತಾ ಕ್ಷಣಗಳು ಮೈದಾನದಲ್ಲಿ ನಡೆಯುತ್ತದೆ. ಕೆಲ ಪರಿಸ್ಥಿತಿಗಳು ನಮಗೆ ವಿರುದ್ಧವಾಗಿರುತ್ತದೆ. ಅದರಲ್ಲಿ ತಪ್ಪೇನೂ ಇಲ್ಲ" ಎಂದು ರೋಹಿತ್ ಶರ್ಮಾ ರಿಷಭ್ ಪಂತ್ಗೆ ಬೆಂಬಲಿಸಿ ಮಾತನಾಡಿದ್ದಾರೆ. ಪಂದ್ಯದ ಮುಕ್ತಾಯದ ಬಳಿಕ ವರ್ಚಯವಲ್ ಮಾಧ್ಯಮಗೋಷ್ಠಿಯಲ್ಲಿ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
"ಇಂತಾ ಸಂದರ್ಭಗಳನ್ನು ಕ್ಲಿಷ್ಟಕರವಾಗಿಸಿಕೊಳ್ಳದೆ ಇವುಗಳಿಂದ ಸಾಕಷ್ಟು ಪಾಠಗಳನ್ನು ಕಲಿಯಬಹುದಾಗಿದೆ. ಆತನಲ್ಲಿ ಅದ್ಭುತವಾದ ಆಲೋಚನಾ ಶಕ್ತಿಯಿದೆ. ಆತ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಗುಣ ಹೊಂದಿದ್ದಾರೆ. ಇದು ಭಾರೀ ಒತ್ತಡಗಳಿಂದ ಕೂಡಿರುವ ಟೂರ್ನಿಯಾಗಿದ್ದು ಸಣ್ಣ ಪುಟ್ಟ ಎಡವುವಿಕೆಗಳು ಸಹಜವಾಗಿರುತ್ತದೆ. ಇಂಥಾ ಸಂದರ್ಭಗಳಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದಿರುವುದು ಪ್ರಮುಖವಾಗಿದೆ. ಅದನ್ನು ನಾನು ಆತನಲ್ಲಿಯೂ ಹೇಳಿದ್ದೇನೆ. ಆತನೋರ್ವ ಆತ್ಮವಿಶ್ವಾಸದಿಂದ ಇರುವ ಹುಡುಗನಾಗಿದ್ದು ಮುಂದಿನ ಆವೃತ್ತಿಯಲ್ಲಿ ಬಲಿಷ್ಠವಾಗಿ ಹೊರಬರಲಿದ್ದಾರೆ" ಎಂದಿದ್ದಾರೆ ರೋಹಿತ್ ಶರ್ಮಾ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಕುಸಿತದ ಹೊರಾತಾಗಿಯೂ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿತ್ತು. ನಿಗದಿತ 20 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ ಏಳು ವಿಕೆಟ್ ಕಳೆದುಕೊಂಡು 159 ರನ್ಗಳನ್ನು ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಬೌಲರ್ಗಳು ಆರಂಭದಲ್ಲಿ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿ ವಿಕೆಟ್ ಕಳೆದುಕೊಂಡರು. ಆದರೆ ಇಶಾನ್ ಕಿಶನ್ 48 ರನ್ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ಆಧಾರವಾದರು. ಡೆವಾಲ್ಡ್ ಬ್ರೇವಿಸ್ 37 ರನ್ಗಳನ್ನು ಸಿಡಿಸಿದರೆ, ತಿಲಕ್ ವರ್ಮ ಹಾಗೂ ಟಿಮ್ ಡೇವಿಡ್ ಅವರಿಂದ ನಿರ್ಣಾಯಕ ಜೊತೆಯಾಟ ಬಂದಿತು. ತಿಲಕ್ ವರ್ಮ 21 ರನ್ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರೆ ಟಿಮ್ ಟೇವಿಡ್ ಕೇವಲ 11 ಎಸೆತಗಳಲ್ಲಿ 34 ರನ್ ಸಿಡಿಸಿ ಮಿಂಚಿದರು. ಅಂತಿಮವಾಗಿ ಇನ್ನೂ ಐದು ಎಸೆತಗಳು ಬಾಕಿಯಿರುವಂತೆಯೇ ಮುಂಬೈ ಇಂಡಿಯನ್ಸ್ ಗೆಲವುಉ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್ಗೆ ಪ್ರವೇಶ ಪಡೆಯುವ ಅವಕಾಶವನ್ನು ಕಳೆದುಕೊಂಡಿತು.