ಮೈದಾನಕ್ಕೆ ನುಗ್ಗಿ ವಿವಾದ ಹುಟ್ಟುಹಾಕಿದ ಪ್ರವೀಣ್ ಆಮ್ರೆ
ಅಂಪೈರ್ ನೋಬಾಲ್ ತೀರ್ಪು ನೀಡಲು ನಿರಾಕರಿಸಿದ ಕೂಡಲೇ ಕೋಪಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ತಮ್ಮ ತಂಡದ ಸಹಾಯಕ ತರಬೇತುದಾರ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ಗಳ ಜತೆ ಚರ್ಚಿಸಲು ಕಳುಸಿದ್ದರು. ಹೀಗೆ ಏಕಾಏಕಿ ಮೈದಾನಕ್ಕೆ ಧಾವಿಸಿದ ಪ್ರವೀಣ್ ಆಮ್ರೆ ಈ ಗೊಂದಲದ ತೀರ್ಪನ್ನು ಮೂರನೇ ಅಂಪೈರ್ಗೆ ವರ್ಗಾಯಿಸಬೇಕೆಂದು ಅಂಪೈರ್ಗಳ ಬಳಿ ಮನವಿ ಮಾಡಿಕೊಂಡರು. ಆದರೆ, ಈ ಮನವಿಗೆ ಸೊಪ್ಪುಹಾಕದ ಅಂಪೈರ್ಗಳು ತಮ್ಮ ನಿರ್ಧಾರವನ್ನು ಬದಲಾಯಿಸದೇ ಉಳಿದರು.
ಪ್ರವೀಣ್ ಆಮ್ರೆ ಪರಿಚಯ
ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ನೋಬಾಲ್ಗಾಗಿ ಮೈದಾನಕ್ಕೆ ನುಗ್ಗಿದ ಪ್ರವೀಣ್ ಆಮ್ರೆ ಪೂರ್ತಿ ಹೆಸರು ಪ್ರವೀಣ್ ಕಲ್ಯಾಣ್ ಆಮ್ರೆ. ಇವರು 1991ರಿಂದ 1999ರವರೆಗೆ ಟೀಮ್ ಇಂಡಿಯಾ ಪರ 11 ಟೆಸ್ಟ್ ಮತ್ತು 37 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದ ಅನುಭವವನ್ನು ಹೊಂದಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿಯಂತಹ ಆಟಗಾರರಿಗೆ ತರಬೇತಿಯನ್ನು ನೀಡಿದ್ದ ರಮಾಕಾಂತ್ ಅರ್ಚೇಕರ್ ಅವರಿಂದ ತರಬೇತಿಯನ್ನು ಪಡೆದಿದ್ದ ಪ್ರವೀಣ್ ಆಮ್ರೆ ಕ್ರಿಕೆಟ್ನಿಂದ ನಿವೃತ್ತಿಯನ್ನು ಪಡೆದ ನಂತರ ಕೋಚ್ ಆಗಿ ಕೆಲಸ ಆರಂಭಿಸಿದರು. 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಂಡರ್ 19 ತಂಡವನ್ನು ಪ್ರವೀಣ್ ಆಮ್ರೆ ಕೋಚ್ ಆಗಿ ಟ್ರೋಫಿ ಗೆಲ್ಲಿಸಿದ್ದರು. ಇನ್ನು ಈ ಹಿಂದೆ ಪುಣೆ ವಾರಿಯರ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ನಿರ್ವಹಿಸಿದ್ದ ಪ್ರವೀಣ್ ಆಮ್ರೆ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪಂದ್ಯ ನಿಲ್ಲಿಸಲು ಮುಂದಾಗಿದ್ದ ರಿಷಭ್ ಪಂತ್
ಪ್ರವೀಣ್ ಆಮ್ರೆ ಮೈದಾನಕ್ಕೆ ನುಗ್ಗಿ ಅಂಪೈರ್ಗಳ ಜತೆ ಚರ್ಚೆಗೆ ಮುಂದಾದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅಂಪೈರ್ ನೋಬಾಲ್ ನೀಡಲು ನಿರಾಕರಿಸಿದಾಗ ಕಣದಲ್ಲಿದ್ದ ತಮ್ಮ ತಂಡದ ಆಟಗಾರರನ್ನು ಡಗ್ಔಟ್ಗೆ ವಾಪಸ್ ಆಗುವಂತೆ ಕೈಸನ್ನೆ ಮೂಲಕ ತಿಳಿಸಿದ್ದರು.