ಈ ಬಾರಿಯ ಅಜೇಯ ತಂಡವನ್ನು ಮುನ್ನಡೆಸುತ್ತಿರುವ ನಾಯಕ
ಈ ಬಾರಿಯ ಐಪಿಎಲ್ನಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಒಂದು ತಂಡವನ್ನು ಬಿಟ್ಟು ಮತ್ತೆಲ್ಲಾ ತಂಡಗಳು ಕೂಡ ಕನಿಷ್ಠ ಒಂದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಜೇಯವಾಗುಳಿದಿರುವ ಆ ಒಂದು ತಂಡವೆಂದರೆ ಗುಜರಾತ್ ಟೈಟನ್ಸ್. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಮಾತ್ರವೇ ಈ ಬಾರಿಯ ಟೂರ್ನಿಯಲ್ಲಿ ಒಂದೂ ಸೋಲು ಕಾಣದ ತಂಡವೆನಿಸಿದೆ. ಈ ತಂಡವನ್ನು ಮುನ್ನಡೆಸುತ್ತಿರುವ ರೀತಿಗೆ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮಾಜಿ ಕೋಚ್ ರವಿ ಶಾಸ್ತ್ರಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಚ್ಚು ನಿರೀಕ್ಷೆಯಿಲ್ಲದ ತಂಡ
ಈ ಬಾರಿಯ ಐಪಿಎಲ್ಗೆ ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳ ಪೈಕಿ ಗುಜರಾತ್ ಟೈಟನ್ಸ್ ಕೂಡ ಒಂದು. ಆದರೆ ಟೂರ್ನಿಯ ಆರಂಭಕ್ಕೂ ಮುನ್ನ ಗುಜರಾತ್ ಟೈಟನ್ಸ್ ತಂಡವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿದ್ದು ಈಗ ಚಿತ್ರಣವೇ ಬದಲಾಗಿದೆ. ಗುಜರಾತ್ ಟೈಟನ್ಸ್ ತಂಡ ಈವರೆಗೆ ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿಯೂ ಸೋಲು ಅನುಭವಿಸಿಲ್ಲ. ಹೀಗಾಗಿ ಇತರ ಎಲ್ಲಾ ತಂಡಗಳು ಸೋಲಿಸಲು ಬಯಸುತ್ತಿರುವ ತಂಡವಾಗಿ ಬದಲಾಗಿದೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್. ಅಲ್ಲದೆ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಮುಂದಿನ ನಾಯಕತ್ವದ ಸ್ಪರ್ಧೆಗೆ ಹಾರ್ದಿಕ್ ಎಂಟ್ರಿ!
ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿರುವ ರೀತಿಗೆ ರವಿ ಶಾಸ್ತ್ರಿ ಮನಸೋತಿದ್ದಾರೆ. ಭಾರತ ತಂಡದ ಮುಂದಿನ ನಾಯಕತ್ವದ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಎಂಟ್ರಿಕೊಟ್ಟಿದ್ದಾರೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. "ಈ ಐಪಿಎಲ್ ಆವೃತ್ತಿಗೆ ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ರಿಷಭ್ ಪಂತ್ ಅವರಂತಾ ಯುವ ನಾಯಕರ ಬಗ್ಗೆ ಚರ್ಚೆಗಳು ನಡೆದಿದೆ. ಈ ಪಟ್ಟಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಕೂಡ ಸೇರಿಸಿ. ಈ ಹುಡುಗನನ್ನು ಈ ಪಟ್ಟಿಯಿಂದ ಹೊರಗಿಡಬೇಡಿ. ಈತ ಭಾರತ ತಂಡವನ್ನು ಮುನ್ನಡೆಸಬಲ್ಲರು" ಎಂದು ರವಿ ಶಾಸ್ತ್ರಿ ಹಾರ್ದಿಕ್ ಪಾಂಡ್ಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಆತನ ಪ್ರದರ್ಶನ ಎಲ್ಲವನ್ನೂ ಹೇಳುತ್ತೆ
"ಆತ ಹೊಸ ಚೆಂಡಿನಿಂದಿಗೆ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದಾರೆ. ಆತ ಫಿಟ್ ಆಗಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಆತನ ಮನಸ್ಸಿನಲ್ಲಿ ಬಹಳಷ್ಟು ಸ್ಪಷ್ಟತೆಯಿದೆ. ಇದರಿಂದಾಗಿ ಆತ ಚಾಣಾಕ್ಷ ಎಂಬುದು ಅರಿವಾಗುತ್ತದೆ. ಆತನ ಮೇಲಿರುವ ಆತನ ಬದ್ಧತೆ ಆತನನ್ನು ಉತ್ತಮ ನಾಯಕನನ್ನಾಗಿಸುತ್ತದೆ" ಎಂದಿದ್ದಾರೆ ರವಿಶಾಸ್ತ್ರಿ