ತಂಡದ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ
ಗುಜರಾತ್ ಟೈಟನ್ಸ್ ವಿರುದ್ಧ ನಡೆದಿದ್ದ ಅಂತಿಮ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು ಸಿದ್ಧಾರ್ಥ್ ಕೌಲ್ ಅವರಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಆ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಸಿದ್ಧಾರ್ಥ್ ಕೌಲ್ 43 ರನ್ ನೀಡಿ ದುಬಾರಿಯಾದರು ಹಾಗೂ ಯಾವುದೇ ವಿಕೆಟ್ ಪಡೆಯದೇ ಮಂಕಾದರು. ಹೀಗಾಗಿ ಸಿದ್ಧಾರ್ಥ್ ಕೌಲ್ ಅವರನ್ನು ಈ ಪಂದ್ಯದಿಂದ ಹೊರಗಿಟ್ಟು ಮತ್ತೆ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.
ನಂಬಿಕೆ ಇಟ್ಟು ಅವಕಾಶ ನೀಡಿದ್ರು ಫಾಫ್ ಡು ಪ್ಲೆಸಿಸ್
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಆದ ಬಳಿಕ ಮಾತನಾಡಿದ ಫಾಫ್ ಡು ಪ್ಲೆಸಿಸ್ ಪವರ್ ಪ್ಲೇ ಸಮಯದಲ್ಲಿ ತಂಡಕ್ಕೆ ವಿಕೆಟ್ ಕಬಳಿಸಿ ಕೊಡುವಂತಹ ಬೌಲರ್ ಅಗತ್ಯತೆ ಇತ್ತು ಹೀಗಾಗಿ ಸಿದ್ಧಾರ್ಥ್ ಕೌಲ್ ಅವರನ್ನು ಆಡುವ ಬಳಗಕ್ಕೆ ಕರೆತರಲಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಫಾಫ್ ಡು ಪ್ಲೆಸಿಸ್ ಅವರ ಈ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದ ಸಿದ್ಧಾರ್ಥ್ ಕೌಲ್ ಆ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.
ಲಕ್ನೋ ವಿರುದ್ಧದ ಲೀಗ್ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದ ಸಿರಾಜ್
ಇನ್ನು ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದಿದ್ದ ಲೀಗ್ ಹಂತದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 31 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಕಳೆದ ಪಂದ್ಯದಲ್ಲಿ ಸಿಕ್ಕಾಪಟ್ಟೆ ದುಬಾರಿಯಾದ ಸಿದ್ಧಾರ್ಥ್ ಕೌಲ್ ಬದಲು ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.