ಕಣದಲ್ಲಿದ್ದ ಆಟಗಾರರನ್ನು ವಾಪಸ್ ಕರೆದ ಪಂತ್
ಹೀಗೆ ಅಂತಿಮ ಓವರ್ನ ಮೂರನೇ ಎಸೆತವನ್ನು ಅಂಪೈರ್ ನೋಬಾಲ್ ಎಂದು ತೀರ್ಪು ಕೊಡದೇ ಇದ್ದದ್ದನ್ನು ಕಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಗ್ ಔಟ್ನಿಂದಲೇ ಅಂಪೈರ್ ತೀರ್ಮಾನದ ವಿರುದ್ಧ ಕಿಡಿಕಾರಿತ್ತು. ಅದರಲ್ಲಿಯೂ ತೀವ್ರ ಸಿಟ್ಟಿಗೆ ಈಡಾಗಿ ತಾಳ್ಮೆ ಕಳೆದುಕೊಂಡ ನಾಯಕ ರಿಷಭ್ ಪಂತ್ ಕಣದಲ್ಲಿದ್ದ ತಮ್ಮ ತಂಡದ ಆಟಗಾರರಾದ ರೋವ್ಮನ್ ಪೊವೆಲ್ ಮತ್ತು ಕುಲ್ದೀಪ್ ಯಾದವ್ರನ್ನು ವಾಪಸ್ ಬರುವಂತೆ ಕೈ ಸನ್ನೆ ಮೂಲಕ ತಿಳಿಸಿದ್ದರು. ಜೊತೆಯಲ್ಲಿಯೇ ಇದ್ದ ಕೋಚ್ ಶೇನ್ ವ್ಯಾಟ್ಸನ್ ಕೂಡ ಅಂಪೈರ್ ತೀರ್ಪಿನ ವಿರುದ್ಧ ಗರಂ ಆಗಿ ಇದೊಂದು ನೋಬಾಲ್ ಎಂದು ಸನ್ನೆ ಮಾಡುತ್ತಿದ್ದರು.
ಪಂದ್ಯದ ವೇಳೆ ಮಧ್ಯಪ್ರವೇಶಿಸಿದ ಕೋಚ್!
ಇನ್ನು ನೋಬಾಲ್ ತೀರ್ಪು ನೀಡಿದ ಅಂಪೈರ್ ವಿರುದ್ಧ ಕಿಡಿಕಾರಿದ ರಿಷಭ್ ಪಂತ್ ತಮ್ಮ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಅಂಪೈರ್ ಜೊತೆ ಚರ್ಚಿಸಲು ಮೈದಾನಕ್ಕೆ ಕಳುಹಿಸಿದರು. ಅದರಂತೆ ಮೈದಾನಕ್ಕೆ ನುಗ್ಗಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ತರಬೇತುದಾರ ಪ್ರವೀಣ್ ಆಮ್ರೆ ಕೆಲಕಾಲ ಅಂಪೈರ್ ಜತೆ ಚರ್ಚಿಸಿ ತೀರ್ಪನ್ನು ಮೂರನೇ ಅಂಪೈರ್ಗೆ ವರ್ಗಾಯಿಸುವಂತೆ ಮನವಿಯನ್ನು ಮಾಡಿದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಿಷಭ್ ಪಂತ್ ನಡೆದುಕೊಂಡ ರೀತಿ ವಿವಾದವನ್ನು ಹುಟ್ಟು ಹಾಕುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.
ಮುಂದುವರಿದ ಪಂದ್ಯ, ಸೋತ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇಷ್ಟೆಲ್ಲಾ ಮನವಿ ಮಾಡಿಕೊಂಡರೂ ಸಹ ಮೂರನೇ ಅಂಪೈರ್ ಮೊರೆ ಹೋಗದ ಲೆಗ್ ಅಂಪೈರ್ ಆ ಎಸೆತವನ್ನು ನ್ಯಾಯಯುತವಾದ ಎಸೆತ ಎಂದು ಪರಿಗಣಿಸಿದರು. ಹಾಗೂ ಮೊದಲ 3 ಎಸೆತಗಳಲ್ಲಿ ಪೊವೆಲ್ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಅಂತಿಮ 3 ಎಸೆತಗಳಲ್ಲಿಯೂ ಸಿಕ್ಸರ್ ಬಾರಿಸಬೇಕಾದ ಅಗತ್ಯವಿತ್ತು. ಆದರೆ, ಓವರ್ನ ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬಾರಿಸಿದ ಪೊವೆಲ್ ಐದನೇ ಎಸೆತದಲ್ಲಿ 2 ರನ್ ಕಲೆ ಹಾಕಿದರು ಹಾಗೂ ಅಂತಿಮ ಎಸೆತದಲ್ಲಿ ಔಟ್ ಆದರು. ಈ ಮೂಲಕ ನೋಬಾಲ್ ಸಿಕ್ಕಿದ್ದರೆ ಗೆಲ್ಲುವ ಅವಕಾಶವನ್ನು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ರನ್ ಮೊತ್ತದ ರೋಚಕ ಹಣಾಹಣಿಯಲ್ಲಿ ಸೋಲನ್ನು ಕಂಡಿದೆ.