ಮೋಸವೆನ್ನಲು ಇದೇ ಕಾರಣ
ಇನ್ನು ನಾಟ್ ಔಟ್ ಇದ್ದ ತೀರ್ಪನ್ನು ಮೂರನೇ ಅಂಪೈರ್ ಡಿಆರ್ಎಸ್ ನಿಯಮದಡಿಯಲ್ಲಿ ಔಟ್ ಎಂದು ಘೋಷಿಸಿದ ನಂತರ ಮೈದಾನದಲ್ಲಿದ್ದ ರೋಹಿತ್ ಶರ್ಮಾ ಸೇರಿದಂತೆ ಇಡೀ ಪ್ರೇಕ್ಷಕ ವೃಂದವೇ ಆಶ್ಚರ್ಯಕ್ಕೊಳಗಾಗಿತ್ತು. ಇದೊಂದು ಮೋಸದ ತೀರ್ಪು ಎಂಬ ಅಭಿಪ್ರಾಯಗಳು ಆ ಕ್ಷಣದಿಂದಲೇ ವ್ಯಕ್ತವಾದವು. ಈ ರೀತಿಯ ಅಭಿಪ್ರಾಯಗಳು ಕೇಳಿಬರಲು ಬಲವಾದ ಕಾರಣವೂ ಸಹ ಇದೆ. ಹೌದು, ಈ ರೀತಿಯ ಅಭಿಪ್ರಾಯ ಮತ್ತು ಅಸಮಾಧಾನ ಉಂಟಾಗಲು ಕಾರಣ ಗೊಂದಲಮಯ ಡಿಆರ್ಎಸ್ ನಿಯಮ. ಡಿಆರ್ಎಸ್ ರಿವ್ಯೂನಲ್ಲಿ ಚೆಂಡು ಬ್ಯಾಟ್ಗೆ ತಾಗದೇ ರೋಹಿತ್ ಶರ್ಮಾ ನಡುವಿಗೆ ಬಡಿದು ವಿಕೆಟ್ ಕೀಪರ್ ಕೈಸೇರಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ, ಅಲ್ಟ್ರಾ ಎಡ್ಜ್ ರಿವ್ಯೂನಲ್ಲಿ ಚೆಂಡು ಬ್ಯಾಟ್ಗೆ ತಾಗಿದೆ ಎಂದು ತೋರಿಸಲಾಗಿದೆ. ಅಷ್ಟೇ ಅಲ್ಲದೇ ಚೆಂಡು ಬ್ಯಾಟ್ ಬಳಿ ಸರಿಯಾಗಿ ಬರುವುದಕ್ಕೂ ಮುನ್ನವೇ ಅಲ್ಟ್ರಾ ಎಡ್ಜ್ನಲ್ಲಿ ಚೆಂಡು ತಾಗಿರುವ ನಕ್ಷೆ ಕಂಡುಬಂದಿದೆ. ಹೀಗೆ ಚೆಂಡು ಬ್ಯಾಟ್ ಬಳಿ ಬರುವುದಕ್ಕೂ ಮುನ್ನ ಅಲ್ಟ್ರಾ ಎಡ್ಜ್ನಲ್ಲಿ ಈ ರೀತಿ ಗೋಚರಿಸಲು ಹೇಗೆ ಸಾಧ್ಯ, ಇದೊಂದು ಮೋಸದ ತೀರ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ತೀರ್ಪನ್ನು ನಂಬದ ರೋಹಿತ್ ಶರ್ಮಾ
ಇನ್ನು ಡಿಆರ್ಎಸ್ ರಿವ್ಯೂನಲ್ಲಿ ಔಟ್ ಎಂದು ಘೋಷಣೆಯಾಗುತ್ತಿದ್ದಂತೆ ಆಶ್ಚರ್ಯಕ್ಕೊಳಗಾದ ರೋಹಿತ್ ಶರ್ಮಾ ಬೇಸರದಲ್ಲಿಯೇ ತಲೆಯಾಡಿಸಿ ಮೈದಾನದಿಂದ ಹೊರನಡೆದಿದ್ದಾರೆ. ರೋಹಿತ್ ಶರ್ಮಾ ಅವರ ಈ ನಡೆ ಆ ತೀರ್ಪಿನ ವಿರುದ್ಧ ನಡೆಸಿದ ಮೌನ ಪ್ರತಿಭಟನೆಯಂತಿತ್ತು. ಇನ್ನು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಕೂಡ ಈ ತೀರ್ಪನ್ನು ಕಂಡು ತಲೆ ಮೇಲೆ ಕೈಹೊತ್ತು ಕುಳಿತರು ಹಾಗೂ ಕ್ರಿಕೆಟ್ ಪ್ರೇಕ್ಷಕರು ಮತ್ತು ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗ ಕೂಡ ಈ ತೀರ್ಪನ್ನು ನಂಬಲಾಗದೇ ಮೌನವಹಿಸಿದ್ದರು.
ಕಮ್ಬ್ಯಾಕ್ ಮಾಡುವಲ್ಲಿ ರೋಹಿತ್ ಪದೇಪದೇ ವಿಫಲ
ಈ ಪಂದ್ಯದಲ್ಲಿ 6 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಕಲೆಹಾಕಿದ ರೋಹಿತ್ ಶರ್ಮಾ ಟೂರ್ನಿಯಲ್ಲಿ ಮತ್ತೊಮ್ಮೆ ವಿಫಲರಾದರು. ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 11 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 200 ರನ್ ಮಾತ್ರ ಗಳಿಸಿದ್ದಾರೆ. ಹಾಗೂ ಟೂರ್ನಿಯಲ್ಲಿ ಒಮ್ಮೆಯೂ ಅರ್ಧಶತಕವನ್ನು ಗಳಿಸಲಾಗದ ರೋಹಿತ್ ಶರ್ಮಾ ತಮ್ಮ ಕೆಟ್ಟ ಫಾರ್ಮ್ ಮುಂದುವರೆಸಿದ್ದಾರೆ.