ನಾಯಕನಾಗುವ ಅವಕಾಶ ಶ್ರೇಯಸ್ ಅಯ್ಯರ್ ಪಾಲಿಗಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಕುರಿತಾಗಿ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಮಾತನಾಡಿದ್ದು, ಮುಂಬರುವ ಐಪಿಎಲ್ ಟೂರ್ನಿಯ ಸಲುವಾಗಿ ಬಹುತೇಕ ತಂಡಗಳು ನೂತನ ನಾಯಕನ ಹುಡುಕಾಟದಲ್ಲಿದ್ದು ಶ್ರೇಯಸ್ ಅಯ್ಯರ್ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಪ್ರಗ್ಯಾನ್ ಓಜಾ ಶ್ರೇಯಸ್ ಅಯ್ಯರ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಇಚ್ಛೆಯಿತ್ತು, ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅದಕ್ಕೆ ಅನುವು ಮಾಡಿಕೊಡದ ಕಾರಣ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದು ಮುಂದಿನ ಆವೃತ್ತಿಯಲ್ಲಿ ಯಾವುದಾದರೊಂದು ತಂಡಕ್ಕೆ ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.
ಶ್ರೇಯಸ್ ಅಯ್ಯರ್ ಈ 4 ತಂಡಗಳಲ್ಲಿ ಯಾವುದಾದರೊಂದು ತಂಡಕ್ಕೆ ನಾಯಕನಾಗಬಹುದು
ಪ್ರಗ್ಯಾನ್ ಓಜಾ ಹೇಳಿದಂತೆ ಶ್ರೇಯಸ್ ಅಯ್ಯರ್ ಈ 4 ತಂಡಗಳಲ್ಲಿ ಯಾವುದಾದರೊಂದು ತಂಡಕ್ಕೆ ನಾಯಕನಾಗುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೂತನ ನಾಯಕನ ಹುಡುಕಾಟದಲ್ಲಿದೆ, ಅತ್ತ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡಗಳಾಗಿ ಆಗಮಿಸುತ್ತಿರುವ ಲಕ್ನೋ ಹಾಗೂ ಅಹ್ಮದಾಬಾದ್ ತಂಡಗಳು ಕೂಡ ನಾಯಕನ ಹುಡುಕಾಟದಲ್ಲಿವೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಸ್ಪಷ್ಟನೆ ಕೂಡ ಇನ್ನೂ ಸಿಕ್ಕಿಲ್ಲ. ಹೀಗಾಗಿ ಈ 4 ತಂಡಗಳ ಪೈಕಿ ಯಾವುದಾದರೊಂದು ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ದಾಖಲೆ ಬರೆದ ಶ್ರೇಯಸ್ ಅಯ್ಯರ್
ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ 171 ಎಸೆತಗಳಲ್ಲಿ 105 ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ 16ನೇ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.