ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯು ದಿನೇ ದಿನೇ ಕುತೂಹಲವನ್ನು ಹೆಚ್ಚಿಸಿಕೊಂಡಿದೆ. ಈ ಬಾರಿ ಐಪಿಎಲ್ ಸೀಸನ್ ಅನ್ನು ದಾಖಲೆಯ ಸಂಖ್ಯೆಯಲ್ಲಿ ಅಭಿಮಾನಿಗಳು ವೀಕ್ಷಿಸುತ್ತಿದ್ದಾರೆ. ಇದರ ನಡುವೆ ಬೆಟ್ಟಿಂಗ್ ದಂಧೆಗಳು ಕೂಡ ಎಗ್ಗಿಲ್ಲದೆ ಸಾಗಿದ್ದು, ಬೇಲಿಯೇ ಎದ್ದು ಎದ್ದು ಹೊಲ ಮೇಯ್ದ ಘಟನೆಗೂ ಸಾಕ್ಷಿಯಾಗಿದೆ.
ಈ ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕುವ ಅಪರಾಧ ಬ್ಯೂರೋದ ತಂಡದ ಭಾಗವಾಗಿದ್ದ ಪೊಲೀಸ್ ಮುಖ್ಯ ಪೇದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ವತಃ ತಾನೇ ಬೆಟ್ಟಿಂಗ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
KKR ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದ ಜೂಹಿ ಚಾವ್ಲಾ ಟ್ರೋಲ್ಗೆ ಗುರಿ
The News Minute ವರದಿಯ ಪ್ರಕಾರ ಕರ್ನಾಟಕ ಪೊಲೀಸರು ಬೆಟ್ಟಿಂಗ್ ಕಿಂಗ್ ಪಿನ್ ಅನ್ನು ಬಂಧಿಸಿದಾಗ, ಜಿಲ್ಲಾ ಅಪರಾಧ ಬ್ಯೂರೋದ ಮುಖ್ಯ ಕಾನ್ಸ್ಟೆಬಲ್ ಬೆಟ್ಟಿಂಗ್ ಕಿಂಗ್ಪಿನ್ಗಿಂತ ದೊಡ್ಡ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಆರೋಪಿ ಪೊಲೀಸನ ಬಂಧನವಾಗಿದೆ.
ಮಾಹಿತಿ ಬಹಿರಂಗವಾದ ಬಳಿಕ ಆರೋಪಿ ಮುಖ್ಯ ಪೇದೆ ಮಂಜುನಾಥ್ (42) ಅವರನ್ನು ಬಂಧಿಸಲಾಗಿದೆ. ಅವರು ಚಿಂತಾಮಣಿ ನಿವಾಸಿ ಎಂದು ವರದಿಯಲ್ಲಿ ಸೇರಿಸಲಾಗಿದೆ. ಜೊತೆಗೆ ತುಂಬಾ ಸಮಯದಿಂದ ಬೆಟ್ಟಿಂಗ್ ದಂಧೆ ನಡೆಸುತ್ತಿರುವುದು ಸಹ ಬಯಲಾಗಿದೆ.
'' ಅವರು ಕ್ರಿಕೆಟ್ ಬೆಟ್ಟಿಂಗ್, ಜೂಜು, ವೇಶ್ಯಾವಾಟಿಕೆ ವಿಚಾರಕ್ಕೆ ಸಂಬಂಧಿಸಿದ ಪೊಲೀಸ್ ತನಿಖಾ ತಂಡದ ಭಾಗವಾಗಿದ್ದರು. ನಾವು ಬೆಟ್ಟಿಂಗ್ ಮಾಸ್ಟರ್ಗಳನ್ನು ಬಂಧಿಸಿದಾಗ , ಈತ ಅವರಿಗಿಂತ ದೊಡ್ಡ ದಂಧೆಯನ್ನು ನಡೆಸುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ'' ಎಂದು ಅಧಿಕಾರಿಯೊಬ್ಬರು ಸುದ್ದಿ ಪೋರ್ಟಲ್ಗೆ ತಿಳಿಸಿದ್ದಾರೆ.
ಕೇವಲ ಕ್ರಿಕೆಟ್ ಮಾತ್ರವಲ್ಲ, ಭೂಮಿ ಮತ್ತು ವಸತಿ ಫ್ಲಾಟ್ಗಳಂತಹ ಹೆಚ್ಚಿನ ಮೌಲ್ಯದ ಆಸ್ತಿಗಳಿಗೆ ಬಾಜಿ ಕಟ್ಟಲು ಆರೋಪಿಗಳು ಜನರನ್ನು ಪ್ರೋತ್ಸಾಹಿಸಿದ್ದಾರೆ ಎಂದು ವರದಿಯಲ್ಲಿ ಸೇರಿಸಲಾಗಿದೆ.
ಪೊಲೀಸ್ ಮುಖ್ಯ ಪೇದೆಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿಂತಾಮಣಿ ನಗರ ಠಾಣೆ ಪೊಲೀಸ್ ಮುಖ್ಯ ಪೇದೆ ಎಂ.ಕೆ. ಮಂಜುನಾಥ್ ಬಂಧಿತ ಎಂದು ತಿಳಿದು ಬಂದಿದೆ.