ಮುಂಬೈ, ಮೇ 05: ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲದರಲ್ಲೂ ಆಲ್ರೌಂಡ್ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಪ್ರಸಕ್ತ ಐಪಿಎಲ್ನ ಅಂತಿಮ ಲೀಗ್ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ಎದುರು 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಕೆಕೆಆರ್ 20 ಓವರ್ಗಳಲ್ಲಿ 7 ವಿಕೆಟ್ಗೆ 133 ರನ್ಗಳ ಅಲ್ಪ ಮೊತ್ತವನ್ನಷ್ಟೇ ದಾಖಲಿಸಿತು.
ಬಳಿಕ ಗುರಿ ಬೆನ್ನತ್ತಿದ ಮುಂಬೈ ತಂಡ ಇನ್ನೂ 23 ಎಸೆತಗಳು ಬಾಕಿ ಇರುವಂತೆಯೇ ಕೇವಲ 1 ವಿಕೆಟ್ ನಷ್ಟದಲ್ಲಿ 134 ರನ್ಗಳನ್ನು ಚಚ್ಚಿ ವಿಜಯೋತ್ಸವ ಆಚರಿಸಿತು.
ಪಂದ್ಯದಲ್ಲಿ ಕೇವಲ ಜಯ ದಾಖಲಿಸಿದ್ದರೆ ಪ್ಲೇ ಆಫ್ಸ್ಗೆ ತಲುಪಬಹುದಿದ್ದ ಉತ್ತಮ ಅವಕಾಶವನ್ನು ಕೈಚೆಲ್ಲಿದ 2 ಬಾರಿಯ ಚಾಂಪಿಯನ್ಸ್ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು.
ಕ್ವಾಲಿಫೈಯರ್ 1ನಲ್ಲಿ ಮುಂಬೈ-ಚೆನ್ನೈ ಫೈಟ್
ನೈಟ್ ರೈಡರ್ಸ್ ವಿರುದ್ಧದ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 1 ಪಂದ್ಯಕ್ಕೆ ಅರ್ಹತೆ ಪಡೆದಿದೆ. ಇದರರ್ಥ ಮೇ 7ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ತಂಡ ತನ್ನ ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದ್ದು, ಸೋತ ತಂಡಕ್ಕೆ ಎಲಿಮಿನೇಟರ್ 2 ಪಂದ್ಯದಲ್ಲಿ ಫೈನಲ್ ಅರ್ಹತೆ ಪಡೆಯುವ ಮತ್ತೊಂದು ಅವಕಾಶ ಲಭ್ಯವಾಗಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ರೈಸರ್ಸ್-ಕ್ಯಾಪಿಟಲ್ಸ್ ಕದನ
ಕೆಕೆಆರ್ ತಂಡದ ಸೋಲಲೆಂದು ಪ್ರಾರ್ಥಿಸುತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಇದೀಗ ನಿರಾಳವಾಗಿದ್ದು, ಮೇ 8ರಂದು ವೈಝಾಗ್ನಲ್ಲಿ ನಡೆಯಲಿರುವ ಎಲಿಮಿನೇಟರ್ 1 ಪಂದ್ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲು ಸಜ್ಜಾಗಲಿದೆ. ಇಲ್ಲಿ ಸೋತ ತಂಡ ಸ್ಪಧರ್ಧೆಯಿಂದ ನಿರ್ಗಮಿಸಿದರೆ, ಗೆದ್ದ ತಂಡವು ಎಲಿಮಿನೇಟರ್ 2 ಪಂದ್ಯಕ್ಕೆ ಮುನ್ನಡೆಯಲಿದೆ.
So, first time in the history of the #IPL, a team with 12 points will qualify for the playoffs. Three teams locked on same points. I’m convinced that it’s because of VVS Laxman’s good karma that #SRH will make it 🤗🙈🥳
— Aakash Chopra (@cricketaakash) May 5, 2019
ಮುಂಬೈ ಪ್ಲೇಯಿಂಗ್ 11
ರೋಹಿತ್ ಶರ್ಮಾ, ಕ್ವಿಂಟನ್ ಡಿ'ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೈರೋನ್ ಪೊಲಾರ್ಡ್, ಮಿಚೆಲ್ ಮೆಕ್ಲೆನೆಗನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ.
ಕೋಲ್ಕೊತಾ ಪ್ಲೇಯಿಂಗ್ 11
ಶುಭಮನ್ ಗಿಲ್, ಕ್ರಿಸ್ ಲಿನ್,ರಾಬಿನ್ ಉತ್ತಪ್ಪ, ಆಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಸುನಿಲ್ ನರೇನ್, ರಿಂಕು ಸಿಂಗ್, ಹ್ಯಾರಿ ಗರ್ನಿ, ಸಂದೀಪ್ ವಾರಿಯರ್, ಪ್ರಸಿಧ್ ಕೃಷ್ಣಾ.