ಚೆನ್ನೈ, ಜನವರಿ 19: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಿಸಿಸಿಐನ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಕ್ಕೆ ಹಾಕಲಾಗಿದೆ. ಈ ಬಗ್ಗೆ ಪರ -ವಿರೋಧ ಚರ್ಚೆ ಜೋರಾಗಿ ನಡೆದಿದೆ. ಆದರೆ, ಮಾಜಿ ನಾಯಕ ಎಂ.ಎಸ್ ಧೋನಿ ಕ್ರಿಕೆಟ್ ಬದುಕು ಇಲ್ಲಿಗೆ ಅಂತ್ಯವಾಗಲ್ಲ ಎಂಬ ಬಲವಾದ ನಂಬಿಕೆ ಅಭಿಮಾನಿಗಳಲ್ಲಿದೆ. ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲಿರುವ ಧೋನಿ ಮುಂದಿನ ಐಪಿಎಲ್ ನಲ್ಲಿ ಅಡುವ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಘೋಷಣೆ ಮಾಡಿದ್ದಾರೆ.
ಮಾಜಿ ನಾಯಕ ಎಂ.ಎಸ್ ಧೋನಿ ವಿಶ್ವಕಪ್ ಪಂದ್ಯಾವಳಿಯ ಬಳಿಕ ಹೊಸ ಗುತ್ತಿಗೆ ಅವಧಿ ಯಾವುದೇ ಪಂದ್ಯದಲ್ಲೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿಲ್ಲ. ಮುಂದಿನ ಐಪಿಎಲ್ ನಲ್ಲಿ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ ತಂಡದಿಂದ ಕೈಬಿಡಲಾಗುತ್ತದೆ ಐಪಿಎಲ್ 2021ರ ಹರಾಜಿನಲ್ಲಿ ಅವರ ಹೆಸರು ಕಾಣಿಸಿಕೊಳ್ಳಲಿದೆ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಹೇಳಿದ್ದಾರೆ.
ಇಂಡಿಯಾ ಸಿಮೆಂಟ್ಸ್ ನ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರು ಧೋನಿ ಭವಿಷ್ಯದ ಬಗ್ಗೆ ಮಾತನಾಡಿ, ಧೋನಿ ಯಾವಾಗ ರಿಟೈರ್ ಆಗುತ್ತಾರೆ, ಎಲ್ಲಿ ತನಕ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಐಪಿಎಲ್ ನಲ್ಲಿ ಧೋನಿ ಆಡಲಿದ್ದಾರೆ. ಮುಂದಿನ ವರ್ಷದಿಂದ ಹರಾಜಿಗೆ ಒಳಪಡಲಿದ್ದಾರೆ. ಆದರೆ, ಅವರನ್ನು ಚೆನ್ನೈ ತಂಡವೇ ರಿಟೇನ್ ಮಾಡಲಿದೆ. ಈ ಬಗ್ಗೆ ಅಭಿಮಾನಿಗಳಿಗೆ ನಾನು ಭರವಸೆ ನೀಡುತ್ತೇನೆ, ಚೆನ್ನೈ ತಂಡದಿಂದ ಹೊರಕ್ಕೆ ಹೋಗಲು ಬಿಡುವುದಿಲ್ಲ ಎಂದು ಶ್ರೀನಿವಾಸನ್ ಅವರು ಸ್ಪಷ್ಟಪಡಿಸಿದರು.
2008ರಿಂದ ಚೆನ್ನೈ ತಂಡದ ಜೊತೆಗಿರುವ ಧೋನಿ ಅವರು, ತಂಡಕ್ಕೆ ಮೂರು ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. 38 ವರ್ಷ ವಯಸ್ಸಿನ ಧೋನಿ ಭಾರತದ ನಾಯಕರಾಗಿ 2007 ವಿಶ್ವ ಟಿ 20, 2011ರ ಏಕದಿನ ಕ್ರಿಕೆಟ್ ಕಪ್ ಗೆಲ್ಲಿಸಿಕೊಟ್ಟರು. 90 ಟೆಸ್ಟ್, 350 ಏಕದಿನ ಕ್ರಿಕೆಟ್, 98 ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ, 17000ಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್, 829 ವಿಕೆಟ್ ಗಳಿಸಿದ್ದಾರೆ.
ಧೋನಿ ಇಲ್ಲದ ಚೆನ್ನೈ ತಂಡ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಬಿಸಿಸಿಐ ಗುತ್ತಿಗೆಯಿಂದ ಹೊರ ಹಾಕಿದ್ದು ನಿರೀಕ್ಷಿತವಾಗಿತ್ತು. ಜುಲೈ 9ರಿಂದ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ. ಐಪಿಎಲ್ ನಲ್ಲಿ ಧೋನಿಯನ್ನು ಚೆನ್ನೈ ಕೈಬಿಟ್ಟರೂ ಮತ್ತೆ ರಿಟೇನ್ ಮಾಡುವ ಭರವಸೆ ಇದ್ದೇ ಇದೆ ಎಂದು ಧೋನಿ ಫ್ಯಾನ್ ಕ್ಲಬ್ ಮುಖಸ್ಥರಾದ ಜೆ ಶಿವಕುಮಾರ್ ಹೇಳಿದ್ದಾರೆ.