2021ನೇ ವರ್ಷದಲ್ಲಿ 3 ಪ್ರತಿಷ್ಟಿತ ಟಿ ಟ್ವೆಂಟಿ ಚುಟುಕು ಸಮರಗಳು ನಡೆದಿದ್ದು, ಎಲ್ಲಾ ಹಣಾಹಣಿಗಳಲ್ಲಿಯೂ ಅಂತಿಮವಾಗಿ ಹಳದಿ ಜೆರ್ಸಿ ಧರಿಸಿದ ತಂಡ ವಿಜೇತ ತಂಡವಾಗಿ ಹೊರಹೊಮ್ಮಿದೆ. ಹೌದು, ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್, ಟಿ ಟ್ವೆಂಟಿ ವಿಶ್ವಕಪ್ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಹಳದಿ ಜರ್ಸಿ ಧರಿಸಿದ ತಂಡಗಳೇ ಟ್ರೋಫಿ ಗೆದ್ದು ಬೀಗಿದೆ.
ಚೆನ್ನೈ ಸೂಪರ್ ಕಿಂಗ್ಸ್
ಈ ಬಾರಿ ಭಾರತ ನೆಲದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಯಲ್ಲಿ ಮುಂದುವರಿದಿದ್ದ ಹದಿನಾಲ್ಕನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ಅಂತ್ಯಗೊಂಡಿತು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ನಾಲ್ಕನೇ ಬಾರಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದು ಎದುರಿಸಿದ್ದ ಟೀಕೆಗಳಿಗೆಲ್ಲಾ ಸರಿಯಾದ ಉತ್ತರವನ್ನು ನೀಡಿತ್ತು. ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧರಿಸಿದ್ದ ಜೆರ್ಸಿಯ ಬಣ್ಣ ಹಳದಿ.
2025ಕ್ಕೆ ಪಾಕಿಸ್ತಾನಕ್ಕೆ ತೆರಳುವುದು ಟೀಂ ಇಂಡಿಯಾಗೆ ಸವಾಲಿನದ್ದಾಗಿದೆ: ಐಸಿಸಿ ಅಧ್ಯಕ್ಷ
ಆಸ್ಟ್ರೇಲಿಯಾ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಜಯ ಸಾಧಿಸುವುದರ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯಿತು. ಆದರೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನ ವಿಶ್ವದಾದ್ಯಂತ ಇರುವ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪಂಡಿತರಲ್ಲಿ ಬಹುತೇಕರು ಆಸ್ಟ್ರೇಲಿಯಾವನ್ನು ಸೆಮಿ ಫೈನಲ್ ಪ್ರವೇಶಿಸಲಿರುವ ತಂಡಗಳ ಪಟ್ಟಿಯಲ್ಲಿ ಪರಿಗಣಿಸಿರಲಿಲ್ಲ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್ ಘಟ್ಟ ತಲುಪಲಿದೆ ಎಂಬುದನ್ನು ಹಲವಾರು ಮಂದಿ ಊಹಿಸಿಯೇ ಇರಲಿಲ್ಲ. ಇಂಗ್ಲೆಂಡ್, ಭಾರತ ಮತ್ತು ನ್ಯೂಜಿಲೆಂಡ್ ರೀತಿಯ ಬಲಿಷ್ಠ ತಂಡಗಳ ಮುಂದೆ ಆಸ್ಟ್ರೇಲಿಯ ಟ್ರೋಫಿ ಎತ್ತಿಹಿಡಿಯಲಿದೆ ಎಂದು ಯಾರೂ ಸಹ ಎಣಿಸಿಯೇ ಇರಲಿಲ್ಲ. ಆದರೆ ಆಸ್ಟ್ರೇಲಿಯಾ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವುದರ ಮೂಲಕ ಈ ಎಲ್ಲದಕ್ಕೂ ಉತ್ತರವನ್ನು ನೀಡಿದೆ. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿದ್ದ ಆಸ್ಟ್ರೇಲಿಯಾ ಕೂಡ ಧರಿಸಿದ್ದು ಹಳದಿ ಜೆರ್ಸಿಯನ್ನೇ.
SMAT 2021 ಫೈನಲ್: ತಮಿಳುನಾಡು ಮುಡಿಗೆ ಟ್ರೋಫಿ, ಕರ್ನಾಟಕಕ್ಕೆ ವಿರೋಚಿತ ಸೋಲು
ತಮಿಳುನಾಡು:
ಇಂದು ( ನವೆಂಬರ್ 22 ) ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಸೆಣೆಸಾಟ ನಡೆಸಿದವು. ಇತ್ತಂಡಗಳ ನಡುವೆ ನಡೆದ ಈ ರೋಚಕ ಹಣಾಹಣಿಯಲ್ಲಿ ಅಂತಿಮ ಹಂತದಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು 4 ವಿಕೆಟ್ಗಳ ಜಯವನ್ನು ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ತಮಿಳುನಾಡು ಕರ್ನಾಟಕವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕುವುದರ ಮೂಲಕ ತಮಿಳುನಾಡು ತಂಡಕ್ಕೆ 152 ರನ್ಗಳ ಗುರಿಯನ್ನು ನೀಡಿತು. ಹೀಗೆ ಕರ್ನಾಟಕ ನೀಡಿದ ಗುರಿಯನ್ನು ಬೆನ್ನತ್ತಿದ ತಮಿಳುನಾಡು ತಂಡಕ್ಕೆ ಅಂತಿಮ ಎಸೆತದಲ್ಲಿ ಗೆಲ್ಲಲು 5 ರನ್ಗಳ ಅಗತ್ಯತೆ ಇತ್ತು. ಹೀಗೆ ಕರ್ನಾಟಕದ ಬೌಲರ್ ಪ್ರತೀಕ್ ಜೈನ್ ಎಸೆದ ಪಂದ್ಯದ ಅಂತಿಮ ಎಸೆತಕ್ಕೆ ತಮಿಳುನಾಡು ತಂಡದ ಶಾರುಖ್ ಖಾನ್ ಸಿಕ್ಸರ್ ಬಾರಿಸಿದರು. ಈ ಮೂಲಕ ತಮಿಳುನಾಡು ರೋಚಕವಾಗಿ 4 ವಿಕೆಟ್ಗಳ ಜಯ ಸಾಧಿಸುವುದರ ಮೂಲಕ ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಹೀಗೆ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಮಿಳುನಾಡು ತಂಡ ಕೂಡ ಧರಿಸಿದ್ದು ಇದೇ ಹಳದಿ ಜೆರ್ಸಿಯನ್ನೇ..
ಹೀಗೆ ಈ ವರ್ಷದಲ್ಲಿ ಇಲ್ಲಿಯವರೆಗೂ ನಡೆದಿರುವ ಪ್ರತಿಷ್ಠಿತ ಟಿ ಟ್ವೆಂಟಿ ಟೂರ್ನಿಗಳಲ್ಲಿ ಹಳದಿ ಜೆರ್ಸಿ ತೊಟ್ಟ ತಂಡಗಳೇ ಬಹುತೇಕ ಚಾಂಪಿಯನ್ ಆಗಿ ಹೊರಹೊಮ್ಮಿವೆ.